ಬೆಂಗಳೂರು: ಸ್ನೇಹಿತರೊಂದಿಗೆ ದಾಸರಹಳ್ಳಿ ಕೆರೆಗೆ ಈಜಲು ತೆರಳಿದ್ದ ಮಹಮ್ಮದ್ ಫರಾಜ್ (16) ಎಂಬಾತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.
ಗೋವಿಂದಪುರ ನಿವಾಸಿ ನವಾಜ್ ಪಾಷಾ ಅವರ ಮಗನಾದ ಫರಾಜ್, ಮಧ್ಯಾಹ್ನ 1.30ರ ಸುಮಾರಿಗೆ ನಾಲ್ಕು ಮಂದಿ ಸ್ನೇಹಿತರೊಂದಿಗೆ ದಾಸರಹಳ್ಳಿ ಕೆರೆಗೆ ಈಜಲು ಹೋಗಿದ್ದ. ಈಜು ಬಾರದ ಕಾರಣದಿಂದ ಆತನ ಸ್ನೇಹಿತರು ದಡದಲ್ಲೇ ಕುಳಿತಿದ್ದರು. ನೀರಿಗೆ ಧುಮುಕಿದ ಫರಾಜ್, ಈಜಿಕೊಂಡು ಕೆರೆಯ ಮಧ್ಯಭಾಗಕ್ಕೆ ತೆರಳಿದ್ದಾನೆ. ಈ ವೇಳೆ ನಿಶಕ್ತನಾದ ಆತ, ಈಜಲು ಸಾಧ್ಯವಾಗದೆ ಮುಳುಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರ್ನಾಲ್ಕು ನಿಮಿಷ ಕಳೆದರೂ ಫರಾಜ್ ನೀರಿನಿಂದ ಮೇಲೆ ಬಾರದಿರುವುದರಿಂದ ಗಾಬರಿಗೊಂಡ ಸ್ನೇಹಿತರು, ನೆರವಿಗೆ ಸ್ಥಳೀಯರನ್ನು ಕೂಗಿದ್ದಾರೆ. ಕೂಡಲೇ ಕೆರೆಗೆ ಜಿಗಿದ ಸ್ಥಳೀಯರು ಆತನ ಹುಡುಕಾಟ ನಡೆಸಿ ವಿಫಲರಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸಂಜೆವರೆಗೂ ಕಾರ್ಯಾಚರಣೆ ನಡೆಸಿದರೂ ಶವ ಪತ್ತೆಯಾಗಲಿಲ್ಲ. ಕತ್ತಲು
ಆವರಿಸಿದ್ದರಿಂದ ಸಿಬ್ಬಂದಿ ದಿನದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರು.
ಸೋಮವಾರ ಬೆಳಿಗ್ಗೆ ಪುನಃ ಶೋಧ ಕಾರ್ಯ ಆರಂಭಿಸಿದ ಸಿಬ್ಬಂದಿಗೆ 9.30ರ ಸುಮಾರಿಗೆ ಶವ ಪತ್ತೆಯಾಗಿದೆ. ಮೃತನ ತಂದೆ ಅಂಗವಿಕಲರಾಗಿದ್ದು, ತಾಯಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಫರಾಜ್ ಕೂಡ 15 ದಿನಗಳಿಂದ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.