ಬೆಂಗಳೂರು: `ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮೊದಲಾದ ಮಹಾನಗರದ ಸ್ಥಳೀಯ ಸಂಸ್ಥೆಗಳು ತಮ್ಮ ಕೆಲಸ ಏನೆಂಬುದನ್ನೇ ಮರೆತುಬಿಟ್ಟಿವೆ. ಗುತ್ತಿಗೆದಾರರ ಲಾಬಿ ಆಡಳಿತ ನಡೆಸುತ್ತಿರುವಂತಿದೆ~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಆಪಾದಿಸಿದರು.
ಅರಣ್ಯ ಇಲಾಖೆ ಆಶ್ರಯದಲ್ಲಿ ಮಂಗಳವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಮಾತನಾಡಿದ ಅವರು, `ಈ ಸ್ಥಳೀಯ ಸಂಸ್ಥೆಗಳು ತಾವಾಗಿಯೇ ಸೃಷ್ಟಿಸಿಕೊಂಡಿರುವ ಗೊಂದಲ ಗೋಜಲುಗಳಿಂದ ಹೊರ ಬಂದರೆ ಅದೇ ದೊಡ್ಡ ಸಾಧನೆಯಾಗಲಿದೆ~ ಎಂದರು.
`ಮಹಾನಗರದಲ್ಲಿ ಸ್ವಚ್ಛತಾ ಕಾರ್ಯ, ಕೆರೆಗಳ ಸಂರಕ್ಷಣೆ, ಮೂಲಸೌಕರ್ಯ ಅಭಿವೃದ್ಧಿ ಮೊದಲಾದ ವಿಚಾರಗಳ ಬಗ್ಗೆ ಬಿಬಿಎಂಪಿ, ಬಿಡಿಎ ಅಧಿಕಾರಿಗಳೊಂದಿಗೆ ಐದು ಬಾರಿ ಸಭೆ ನಡೆಸಿ ಸಲಹೆ ಸೂಚನೆ ನೀಡಿದ್ದೆ. ಆದರೆ ಕ್ರಮ ಕೈಗೊಂಡಿರುವ ಬಗ್ಗೆ ಯಾರೊಬ್ಬರೂ ಒಂದು ವರದಿಯನ್ನೂ ನೀಡಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು.
`ಲಾಲ್ಬಾಗ್ನಲ್ಲಿ ವಾಯು ವಿಹಾರಕ್ಕೆಂದು ಬರುವ ಹಿರಿಯ ನಾಗರಿಕರಿಗೆ ಶೌಚಾಲಯ ಸೌಕರ್ಯ ಇಲ್ಲ. ಅಲ್ಲಿ ಸ್ವಚ್ಛತೆಯೂ ಇಲ್ಲ~ ಎಂದು ಹೇಳಿದ ಅವರು, `ನಗರದಲ್ಲಿ ಶ್ರಮದಾನದ ಮೂಲಕ ನೈರ್ಮಲ್ಯ ಕಾರ್ಯಕ್ರಮ ಹಮ್ಮಿಕೊಳ್ಳಲು ಸಲಹೆ ನೀಡಿದೆ. ನಂತರ ಆ ಸಂಸ್ಥೆ ಕೂಡ ಏನು ಮಾಡಿದಂತಿಲ್ಲ~ ಎಂದರು.
ಕೆರೆಗಳ ಒತ್ತುವರಿ: `ಫಿನ್ಲ್ಯಾಂಡ್ನಂತಹ ಪುಟ್ಟ ದೇಶದಲ್ಲಿ ಅತ್ಯಂತ ಸಣ್ಣ ಕೆರೆಗಳನ್ನು ರಕ್ಷಿಸಿ, ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಲಾಗಿದೆ. ಕೆರೆಗಳಿಂದಲೇ ಗ್ರಾಮೀಣ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ~ ಎಂದು ಅವರು ಹೇಳಿದರು.