ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ಸ್ಥಾವರದ ಸುತ್ತಮುತ್ತ ಇರುವ ಗ್ರಾಮಗಳ ಮೂಲಸೌಕರ್ಯ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವ ಸಿದ್ಧಪಡಿಸಿರುವುದಾಗಿ ಕರ್ನಾಟಕ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (ಎನ್ಡಿಎಂಎ) ತಿಳಿಸಿದೆ.
ಪರಮಾಣು ವಿಪತ್ತು ಎದುರಿಸಲು ವಿವಿಧ ಸಂಸ್ಥೆಗಳು ಮಾಡಿಕೊಂಡ ಸಿದ್ಧತೆಗಳನ್ನು ಪರಿಶೀಲಿಸಲು ಎನ್ಡಿಎಂಎ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಪರಮಾಣು ಸ್ಥಾವರ ಪ್ರದೇಶಗಳಲ್ಲಿ ಅಣಕು ಕಾರ್ಯಾಚರಣೆ ನಡೆಸಿತ್ತು.
ಅಲ್ಲದೆ ಅಣು ಸ್ಥಾವರಗಳ `ತುರ್ತು ಯೋಜನಾ ವಲಯ~ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಅಭಿವೃದ್ಧಿ ಯೋಜನೆ ರೂಪಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು.
ಈ ನಡುವೆ, ರಾಜ್ಯಸಭಾ ಸದಸ್ಯ ಸೀತಾರಾಂ ಯೆಚೂರಿ ಅವರ ನೇತೃತ್ವದ ನಿಯೋಗವನ್ನು ಭೇಟಿ ಮಾಡಿದ ಎನ್ಡಿಎಂಎ ಉಪಾಧ್ಯಕ್ಷ ಶಶಿಧರ್ ರೆಡ್ಡಿ, ಆರೋಗ್ಯ ಕಾಳಜಿ, ಶಿಕ್ಷಣ ಸೇರಿದಂತೆ ಪರಮಾಣು ಸ್ಥಾವರಕ್ಕೆ ಸಮೀಪದ ಗ್ರಾಮಸ್ಥರಿಗೆ ಉತ್ತಮ ಮೂಲಸೌಕರ್ಯ ಒದಗಿಸುವ ಭರವಸೆ ನೀಡಿದರು.