ಮಡಿಕೇರಿ: `ಕೊಡವ ಲ್ಯಾಂಡ್' ರಚನೆಯ ಹೋರಾಟಕ್ಕೆ ಕೇಂದ್ರ ಸರ್ಕಾರ 2014ರೊಳಗೆ ಸ್ಪಂದಿಸದಿದ್ದಲ್ಲಿ ವಿಶ್ವ ಸಂಸ್ಥೆಯ ಬಳಿ ತೆರಳುವುದಾಗಿ ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಲ್ಯಾಂಡ್ ರಚನೆಯ ಹೋರಾಟದ ಅಂಗವಾಗಿ ಸಿಎನ್ಸಿ ಇತ್ತೀಚೆಗೆ ಆಚರಿಸಿದ ಕೊಡವ ನ್ಯಾಷನಲ್ ಡೇಯಲ್ಲಿ ನಿರ್ಣಯಿಸಲಾಗಿರುವ ನಿರ್ಣಯಗಳನ್ನು ಪ್ರಧಾನಮಂತ್ರಿ ಹಾಗೂ ಗೃಹ ಮಂತ್ರಿ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿರುವುದಾಗಿ ತಿಳಿಸಿದರು.
ಈ ಹೋರಾಟದ ಅಂಗವಾಗಿ 2013ರ ನವೆಂಬರ್ 1 ರಂದು 5 ಸಾವಿರ ಜನರು ದೆಹಲಿಗೆ ತೆರಳಲು ನಿರ್ಣಯಿಸಲಾಗಿದೆ ಎಂದರು.
ಕೊಡವ- ಕೊಡವತಿಯರಿಗೆ ಬಂದೂಕು ಹೊಂದುವ ಅವಕಾಶವಿದ್ದು, ಕೊಡವ ಎಂದು ಸಾಬೀತು ಪಡಿಸುವ ವಿನಾಯಿತಿ ಪತ್ರವನ್ನು ನೀಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಅಂಗವಾಗಿ ಡಿ.10 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.