ಶಹಾಪುರ: ತಾಲ್ಲೂಕಿನ ಹೊತಪೇಟ ಗ್ರಾಮದ ಮಲ್ಲಪ್ಪ ರಾಯಪ್ಪ ಶಿಕ್ಷೆಗೆ ಗುರಿಯಾಗಿದ್ದ. ದಶಕದ ಹಿಂದೆ ತಲೆ ಮರೆಸಿಕೊಂಡಿದ್ದರು. ಜಿಲ್ಲಾ ಸೆಷನ್ಸ್ ಕೋರ್ಟ್ನ ನ್ಯಾಯಾಧೀಶರಾದ ಹಂಚಾಟೆ ಸಂಜೀವಕುಮಾರ ಬೀಸಿದ ಚಾಟಿ ಎಟಿಗೆ ಯಾದಗಿರಿ ಜಿಲ್ಲಾ ಪೊಲೀಸ್ ತಂಡವು ಸುಸ್ತು ಹೊಡೆದು ಕೊನೆಗೆ ಆರೋಪಿಯನ್ನು ಬಂಧಿಸಿದ್ದಾರೆ.
ದಶಕ ಹಿಂದೆ ಪರಾರಿಯಾಗಿದ್ದ ಆರೋಪಿ ಮಲ್ಲಪ್ಪ ರಾಯಪ್ಪ ಹೊತಪೇಟ ಸಿಂದಗಿ ತಾಲ್ಲೂಕಿನ ಕುಳೇಕುಮರಟಗಿ ಗ್ರಾಮದಲ್ಲಿ ಶರಣಪ್ಪ ಅಂತಾ ಬೇರೆ ಹೆಸರು ಇಟ್ಟುಕೊಂಡು ವಾಸವಾಗಿದ್ದ. ಪೊಲೀಸರು ಮಾರುವೇಶದಲ್ಲಿ ಆಗಮಿಸಿ ಆರೋಪಿಯನ್ನು ಸೋಮವಾರ ಬಂಧಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಡಿವೈಎಸ್ಪಿ ತಿಳಿಸಿದ್ದಾರೆ.
ಹಿನ್ನೆಲೆ: ಗುಲ್ಬರ್ಗ ಸೇಷನ್ಸ್ ಕೋರ್ಟ್ (ಫಸ್ಟ್ ಎಡಿಶನಲ್)ನಲ್ಲಿ 1998 ಜೂನ್ 26ರಂದು ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಆರೋಪದ ಮೇಲೆ ಮಲ್ಲಪ್ಪ ಶಿಕ್ಷೆಗೆ ಒಳಗಾಗಿದ್ದ. ಅಂದಿನ ದಿನ ಆರೋಪಿ ಶಿಕ್ಷೆ ಪ್ರಕಟಿಸುವ ಮುಂಚೆ ನಾಪತ್ತೆಯಾದ. ಕೋರ್ಟ್ ಶಿಕ್ಷೆಯನ್ನು ಪ್ರಕಟಿಸಿ ಆರೋಪಿಯ ವಿರುದ್ಧ ವಾರೆಂಟ ಜಾರಿ ಮಾಡಲಾಗಿತ್ತು.
ನಂತರ ಕೋರ್ಟ್ ಕಾನೂನು ಪ್ರಕಾರ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಂಡರು ಆರೋಪಿ ಮಾತ್ರ ಪತ್ತೆಯಾಗಲಿಲ್ಲ ಹೇಳಲಾಗುತ್ತಿದೆ. ಯಾದಗಿರಿ ಜಿಲ್ಲೆಯಾದ ಬಳಿಕ ಪ್ರಕರಣ ವರ್ಗಾವಣೆಗೊಂಡಿತು.
ಜಿಲ್ಲಾ ಸೇಷನ್ಸ್ ಕೋರ್ಟ್ನ ನ್ಯಾಯಾಧೀಶರಾದ ಹಂಚಾಟೆ ಸಂಜೀವಕುಮಾರ ಪ್ರಕರಣದ ಬಗ್ಗೆ ಗಂಭೀರತೆಯನ್ನು ತೆಗೆದುಕೊಂಡು ಕೋರ್ಟ್ ತೀರ್ಪು ನೀಡಿದ ಬಳಿಕ ಆರೋಪಿ ಪರಾರಿಯಾಗುತ್ತಾನೆ ಅಂದರೆ ಏನು ? ಕೋರ್ಟ್ ಆದೇಶ ಜಾರಿಯಾಗದಿದ್ದರೆ ಅದು ಕಾಗದದಲ್ಲಿ ಮಾತ್ರ ಉಳಿದು ಬಿಡುತ್ತದೆ ಎಂ ಕೋರ್ಟ್ನ ಆದೇಶದಲ್ಲಿ ಅಭಿಪ್ರಾಯಪಡಲಾಗಿದೆ. ಅಲ್ಲದೆ ಕೋರ್ಟ್ನ ಮುಂದೆ ಆರೋಪಿಯನ್ನು ಅ.3ರ ಒಳಗೆ ಪತ್ತೆ ಹಚ್ಚಬೇಕೆಂದು ಗಡುವು ವಿಧಿಸಿತ್ತು.
ಕೊನೆಗೆ ಸರ್ಕಾರಿ ಅಭಿಯೋಜಕರು ಜಿಲ್ಲಾ ಎಸ್ಪಿ ನೇತೃತ್ವದ ತಂಡವನ್ನು ರಚಿಸುವಂತೆ ನಿವೇದಿಸಿಕೊಂಡರು.ಅದರಂತೆ ತಂಡ ರಚಿಸಿದಾಗ ಎಚ್ಚೆತ್ತಕೊಂಡ ಪೊಲೀಸ್ ಇಲಾಖೆ ತಂಡವನ್ನು ರಚಿಸಿಕೊಂಡು ಹರಸಾಹಸ ಮಾಡಿ ಮಾರುವೇಷದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ದಶಕದ ಹಿಂದೆ ಪರಾರಿಯಾಗಿದ್ದ ಆರೋಪಿ ಎಷ್ಟು ಪ್ರಯತ್ನಿಸಿದರು ಕೂಡಾ ಕಾನೂನು ಅಕ್ಟೋಪಸ್ ಕೈಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುವುದು ಪ್ರಕರಣ ಸಾಬೀತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.