ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲ ತರಬೇತಿಗೆ ಸರ್ಕಾರ ಕ್ರಮ

Last Updated 11 ಜೂನ್ 2011, 8:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಉದ್ಯೋಗದಾತರು ಬಯಸುವ ಕೌಶಲ ಹಾಗೂ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿರುವ ಶಿಕ್ಷಣದ ನಡುವೆ ಸಾಕಷ್ಟು ಅಂತರವಿದೆ. ಈ ಅಂತರವನ್ನು ತಗ್ಗಿಸುವ ನಿಟ್ಟಿನಲ್ಲಿ ಉದ್ಯೋಗಾ ಕಾಂಕ್ಷಿಗಳಿಗೆ ಕೌಶಲ ತರಬೇತಿ ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ~ ಎಂದು ಕಾರ್ಮಿಕ ಇಲಾಖೆಯ ಕಾರ್ಯ ದರ್ಶಿ ಜಿ.ಎಸ್. ನಾರಾಯಣ ಸ್ವಾಮಿ ಹೇಳಿದರು.

ಕೌಶಲ್ಯ ಆಯೋಗ, ಉದ್ಯೋಗ ಮತ್ತು ತರಬೇತಿ ಇಲಾಖೆ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿ ವೃದ್ಧಿ ನಿಗಮದ ವತಿಯಿಂದ ಇಲ್ಲಿನ ವಿದ್ಯಾನಗರದ ಎಂ.ಆರ್. ಸಾಖರೆ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸ ಲಾದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

`ದೇಶದಲ್ಲಿ ಉದ್ಯೋಗಗಳ ಕೊರತೆ ಇಲ್ಲ. ಕೌಶಲ ಇರುವ ಕಾರ್ಮಿಕರ ಕೊರತೆ ಸಾಕಷ್ಟಿದೆ. ಉದ್ಯೋಗಾಂಕ್ಷಿ ಗಳಿಗೆ ಇಂತಹ ಅಗತ್ಯ ಕೌಶಲ ಕಲಿಸಲು ಅಲ್ಪಾವಧಿಯ ತರಬೇತಿಯನ್ನು ಸರ್ಕಾರ ನೀಡುತ್ತಿದೆ~ ಎಂದೂ ಅವರು ಹೇಳಿದರು.

`ಈ ಹಿಂದೆ ಸರ್ಕಾರಿ ಉದ್ಯೋಗಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯ ವಾಗುತ್ತಿದ್ದವು. ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ ಆಕಾಂಕ್ಷಿಗಳಿಗೆ ಕೆಲಸ ಕೊಡಿಸುವ ಕೆಲಸವನ್ನೂ ಸರ್ಕಾರ ಮಾಡುತ್ತಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ಸರ್ಕಾರಿ ಉದ್ಯೋಗಗಳ ಸಂಖ್ಯೆ ಕ್ಷೀಣಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈಗ ಉದ್ಯೋಗದಾತನ ಬದಲಾಗಿ ಉದ್ಯೋಗ ಕೊಡಿಸುವ ಪಾತ್ರ ನಿರ್ವಹಿಸುತ್ತ ಹೆಚ್ಚಿನ ಗಮನ ನೀಡುತ್ತಿದೆ~ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಹೇಳಿದರು.

`ಉದ್ಯೋಗ ವಿನಿಮಯ ಕೇಂದ್ರ ಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಆಯಾ ಜಿಲ್ಲೆಯಲ್ಲಿರುವ ಉದ್ಯೋಗ ದಾತರಿಗೆ ಬೇಕಾಗುವ ಕೌಶಲ ಅವಶ್ಯಕತೆ ಅರಿತು, ಸೂಕ್ತ ಅಭ್ಯರ್ಥಿಗಳನ್ನು ಒದಗಿಸುವ ಕೆಲಸವನ್ನು ಈ ಕೇಂದ್ರದ ಮೂಲಕ ಮಾಡಲಾಗುತ್ತಿದೆ~ ಎಂದೂ ಅವರು ಹೇಳಿದರು.

`ಕಳೆದ ವರ್ಷ ಒಂದು ಲಕ್ಷ ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ನೀಡಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ 6 ಲಕ್ಷ ಉದ್ಯೋಗಾ ಕಾಂಕ್ಷಿಗಳಿಗೆ ತರಬೇತಿ ನೀಡುವ ಯೋಜನೆ ರೂಪಿಸಲಾಗಿದೆ. ಉದ್ಯೋಗಕ್ಕೆ ಅಗತ್ಯವಿರುವ ಕೌಶಲ ಕಲಿಸುವ ಈ ತರಬೇತಿಯನ್ನು ಉಚಿತ ವಾಗಿ ಸರ್ಕಾರದ ವತಿಯಿಂದ ನೀಡಲಾಗುವುದು. 2-3 ತಿಂಗಳ ತರಬೇತಿ ಇದಾಗಿರುತ್ತದೆ~ ಎಂದರು.

ವಿದೇಶಿ ತರಬೇತಿ ಕೇಂದ್ರಗಳು
`ನಮ್ಮ ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಯುವಜನಾಂಗವೇ ಇದ್ದರೆ, ಉಳಿದ ದೇಶಗಳಲ್ಲಿ ಯುವ ಸಮುದಾಯದ  ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯ ಸರ್ಕಾರವು ತನ್ನ ದೇಶದಲ್ಲಿನ ಉದ್ಯೋಗಗಳಿಗಾಗಿ ರಾಜ್ಯದ ಯುವಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ~ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆ ಯೊಂದನ್ನು ಮಾಡಿಕೊಂಡು, ಬೆಂಗಳೂರಿನಲ್ಲಿ ತರಬೇತಿ ಕೇಂದ್ರವೊಂದನ್ನು ತೆರೆಯಲು ಅದು ಆಲೋಚಿಸಿದೆ. ಇದೇ ರೀತಿ ಜರ್ಮನಿ ಸರ್ಕಾರದ ಸಹಯೋಗದಲ್ಲಿ ಬೆಂಗಳೂರು ಮತ್ತು ಗುಲ್ಬರ್ಗದಲ್ಲಿ 40 ಕೋಟಿ ರೂಪಾಯಿ ವೆಚ್ಚದಲ್ಲಿ ಬಹು ಕೌಶಲ ಕೇಂದ್ರಗಳನ್ನು ಆರಂಭಿಸುವ ಮೂಲಕ ಯೂರೋಪಿನ ವಿವಿಧೆಡೆ ಉದ್ಯೋಗ ಪಡೆದು ಕೊಳ್ಳಲು ಯುವಕರಿಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ~ ಎಂದು ಅವರು ತಿಳಿಸಿದರು.

ಕೌಶಲ್ಯ ಅಭಿವೃದ್ಧಿ ನಿಗಮದ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ವಿಷ್ಣುಕಾಂತ ಚಟಪಲ್ಲಿ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಜಂಟಿ ನಿರ್ದೇಶಕ ಶ್ರೀಕಾಂತ ಮಾಲಗತ್ತಿ, ಉದ್ಯೋಗ ಮತ್ತು ತರಬೇತಿ ಇಲಾಖೆಯ ಜಂಟಿ ನಿರ್ದೇಶಕ ರಾಮಚಂದ್ರಪ್ಪ, ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ನೂರುದ್ದೀನ್ ಮೊದಲಾದವರು ಉಪಸ್ಥಿತರಿದ್ದರು. ಹುಬ್ಬಳ್ಳಿ ಸರ್ಕಾರಿ ಐಟಿಐ ಪ್ರಾಚಾರ್ಯ ಪಿ. ರಮೇಶ್ಯ ಸ್ವಾಗತಿಸಿದರು. ಸಿದ್ದಲಿಂಗ ಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT