ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕ್ರಮ ಕೈಗೊಳ್ಳಲು ಅಧಿಕಾರಿ ನಿರ್ಲಕ್ಷ್ಯ'

ಹರಪನಹಳ್ಳಿ; ಉದ್ಯೋಗ ಖಾತ್ರಿ ಯೋಜನೆ ಅವ್ಯವಹಾರ
Last Updated 17 ಜುಲೈ 2013, 9:04 IST
ಅಕ್ಷರ ಗಾತ್ರ

ಹರಪನಹಳ್ಳಿ:  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಆಡಳಿತ ವೆಚ್ಚದ ಬಾಬ್ತಿನಲ್ಲಿ ರೂ 5.74 ಲಕ್ಷ ಮೊತ್ತದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಕೆ. ಕಲ್ಲಹಳ್ಳಿ ಗ್ರಾಮ ಪಂಚಾಯ್ತಿ ಹಿಂದಿನ ಅಧ್ಯಕ್ಷೆ ಹಾಗೂ ಸದಸ್ಯೆ ಸೇರಿದಂತೆ ಪಂಚಾಯ್ತಿ ಕಾರ್ಯದರ್ಶಿ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಬಿ.ಹೇಮಚಂದ್ರ ಬರೆದಿರುವ ಪತ್ರವನ್ನು ಸ್ಥಳೀಯ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಟಿ.ಪಾಂಡ್ಯಪ್ಪ ನಿರ್ಲಕ್ಷ್ಯವಹಿಸಿರುವ ಅಂಶ ಬೆಳಕಿಗೆ ಬಂದಿದೆ.

ತಾಲೂಕಿನ ಕೆ. ಕಲ್ಲಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 2012-13ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಆಡಳಿತ ವೆಚ್ಚದ ಬಾಬ್ತಿನಲ್ಲಿ ರೂ 5.74 ಲಕ್ಷ ಮೊತ್ತದ ಅನುದಾನವನ್ನು ಅಧ್ಯಕ್ಷೆ ಮಂಜುಳಾ ರೇವಣಸಿದ್ದಪ್ಪ(ಈಗ ಮಾಜಿ ಅಧ್ಯಕ್ಷೆ), ಸದಸ್ಯೆ ಲಕ್ಷ್ಮವ್ವ (ಹಾಲಿ ಅಧ್ಯಕ್ಷೆ) ಹಾಗೂ ಪಂಚಾಯ್ತಿ ಕಾರ್ಯದರ್ಶಿ ಎಂ.ಚನ್ನಬಸಪ್ಪ (ಈಗ ನಿವೃತ್ತಿ) ಇವರುಗಳು ಯೋಜನೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಿಂದ ದೃಢಪಟಿರುವ ಹಿನ್ನೆಲೆಯಲ್ಲಿ ಮೂವರಿಂದಲೂ ದುರ್ಬಳಕೆ ಮಾಡಿಕೊಂಡಿರುವ ಹಣವನ್ನು ವಸೂಲಿ ಮಾಡುವಂತೆ ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಸದಸ್ಯರು ಅವ್ಯವಹಾರದಲ್ಲಿ ನೇರವಾಗಿ ಭಾಗಿಯಾಗಿರುವುದರಿಂದ ಕರ್ನಾಟಕ ಪಂಚಾಯ್ತಿರಾಜ್ ಅಧಿನಿಯಮ 1993 ಪ್ರಕರಣ 12(ಎಚ್) ಅನ್ವಯ ಸದಸ್ಯತ್ವ ರದ್ದುಪಡಿಸುವ ಬಗ್ಗೆ ಕರ್ನಾಟಕ ಪಂಚಾಯ್ತಿರಾಜ್ ಅಧಿನಿಯಮ 1993 ಪ್ರಕರಣ 13 ರ ಅಡಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ನಿರ್ದೇಶನ ನೀಡುವಂತೆ ಹಾಗೂ ಪಂಚಾಯ್ತಿ ಕಾರ್ಯದರ್ಶಿ ಎಂ.ಚನ್ನಬಸಪ್ಪ ವಿರುದ್ಧ ತೆಗೆದುಕೊಂಡಿರುವ ಕ್ರಮದ ವಿರುದ್ಧ ಸೂಕ್ತ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಹೇಮಚಂದ್ರ ಅವರು ಕಳೆದ ಏಪ್ರಿಲ್ ತಿಂಗಳಲ್ಲಿ ಕಾರ್ಯ ನಿರ್ವಹಣಾಧಿಕಾರಿಗೆ ಪತ್ರ ಬರೆದು ಸೂಚನೆ ನೀಡಿದ್ದರು.

ಆದರೆ, ಸ್ಥಳೀಯ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಟಿ.ಪಾಂಡ್ಯಪ್ಪ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸೂಕ್ತ ಕ್ರಮ ಜರುಗಿಸದ ಹಾಗೂ ಚುನಾವಣಾ ಆಯೋಗಕ್ಕೆ ಉಭಯರ ಸದಸ್ಯತ್ವ ರದ್ದುಪಡಿಸುವಂತೆ ದೂರು ದಾಖಲಿಸದ ಹಿನ್ನೆಲೆಯಲ್ಲಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಲಕ್ಷ್ವವ್ವ ಅವರು ಎರಡನೇ ಅವಧಿಯ ಅಧ್ಯಕ್ಷರಾಗಿ ಜು. 15ರಂದು ಆಯ್ಕೆಯಾಗಿದ್ದಾರೆ ಎಂದು ಪಟ್ಟಣದ ವಕೀಲ ವಿ.ಜಿ. ಪ್ರಕಾಶಗೌಡ ಆರೋಪಿಸಿದ್ದಾರೆ. ಈ ಕುರಿತು ಮಾಹಿತಿ ಹಕ್ಕು ಅಧಿನಿಯಮದಲ್ಲಿ ಮಾಹಿತಿ ಅವರು ಮಾಹಿತಿ ಪಡೆದುಕೊಂಡಿರುವ ಪತ್ರದ ಪ್ರತಿ `ಪ್ರಜಾವಾಣಿ'ಗೆ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT