ಸುರಪುರ: ಕ್ರೀಡೆಗಳು ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಕ್ರೀಡೆಯಿಂದ ಲಭಿಸುತ್ತದೆ. ಕ್ರೀಡೆಗಳು ಸ್ಪರ್ಧಾ ಮನೋಭಾವ ಬೆಳೆಸುತ್ತವೆ. ಪರಸ್ಪರ ಪ್ರೀತಿ, ಭಾತೃತ್ವತೆ, ಸ್ನೇಹ ವೃದ್ಧಿಯಾಗಲೂ ಕ್ರೀಡೆಗಳು ಸಹಕಾರಿ ಎಂದು ದೇವಪುರ ಜಡಿಶಾಂತಲಿಂಗೇಶ್ವರ ಮಠದ ಶಿವಮೂರ್ತಿ ಶಿವಾಚಾರ್ಯರು ಪ್ರತಿಪಾದಿಸಿದರು.
ಇಲ್ಲಿನ ಪ್ರಭು ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ದಿವಂಗತ ತಿಮ್ಮಪ್ಪನಾಯಕ್ ಜಾಗೀರದಾರ್ ಸ್ಮರಣಾರ್ಥ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ವರ್ತಕರ ಸಂಘದ ಅಧ್ಯಕ್ಷ ಕಿಶೋರಚಂದ್ ಜೈನ್ ಮಾತನಾಡಿ, ಅವರವರ ಇಷ್ಟದ ಕ್ರೀಡೆಗಳಲ್ಲಿ ಪ್ರತಿಯೊಬ್ಬರು ತಪ್ಪದೆ ಭಾಗವಹಿಸಬೇಕು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಆಟದಲ್ಲಿ ಕ್ರೀಡಾ ಮನೋಭಾವನೆ ಮುಖ್ಯ. ನಮ್ಮ ದೇಶದಲ್ಲಿ ಕ್ರಿಕೆಟ್ಗೆ ಇರುವಷ್ಟು ಜನಪ್ರಿಯತೆ ಬೇರೆ ಕ್ರೀಡೆಗಳಿಗಿಲ್ಲ. ಇತರ ಕ್ರೀಡೆಗಳಿಗೆ ಪ್ರೋತ್ಸಾಹ ದೊರಕಬೇಕು ಎಂದು ನುಡಿದರು.
ಜಿಲ್ಲಾ ಪಂಚಾಯಿತಿ ಪ್ರತಿಪಕ್ಷದ ನಾಯಕ ಎಚ್. ಸಿ. ಪಾಟೀಲ, ಪ್ರಭು ಕಾಲೇಜಿನ ಪ್ರಾಚಾರ್ಯ ಡಾ. ಬಿ. ಜಿ. ಬಾವಿ ಮಾತನಾಡಿದರು. ಟೂರ್ನಿ ಸಂಯೋಜಕ ಬಬ್ಲೂಗೌಡ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಾಜಾ ಹನುಮಪ್ಪನಾಯಕ್, ಯಲ್ಲಪ್ಪ ಕುರಕುಂದಿ, ಪುರಸಭೆ ಅಧ್ಯಕ್ಷ ಚಂದ್ರಶೇಖರ ಹಸನಾಪುರ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ದಂಡಿನ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ರಾಮನಗೌಡ ಸುಬೇದಾರ್, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜಾ ಮುಕುಂದ ನಾಯಕ್, ಪುರಸಭೆ ಸದಸ್ಯರಾದ ವೇಣುಮಾಧವನಾಯಕ್, ನರಸಿಂಹಕಾಂತ ಪಂಚಮಗಿರಿ, ಲಿಯಾಕತ್ ಕಟಪಟ್, ಪ್ರಮುಖರಾದ ಪ್ರಕಾಶ ಗುತ್ತೇದಾರ್, ರಾಜಾ ಪಾಮನಾಯಕ್, ರಾಯಚಂದ ಜೈನ್, ಎಸ್. ಎನ್. ಪಾಟೀಲ, ಭೀಮಣ್ಣ ಬೇವಿನಾಳ, ಬಲಭೀಮನಾಯಕ್ ಭೈರಿಮರಡಿ, ಶಂಕರನಾಯಕ್, ಈಶ್ವರನಾಯಕ್, ಪಾರಪ್ಪ ಗುತ್ತೇದಾರ್, ವಿಷ್ಣು ಗುತ್ತೇದಾರ್, ವಿರೇಶ ಕುಲಕರ್ಣಿ ಇದ್ದರು.