ನವದೆಹಲಿ: ಪ್ರಸಕ್ತ ವಿಧಾನಸಭಾ ಚುನಾವಣಾ ಫಲಿತಾಂಶದ ಅತಿದೊಡ್ಡ ಸುದ್ದಿಯನ್ನು ಯಾವುದೇ ಮತಗಟ್ಟೆ ಸಮೀಕ್ಷೆಗಳು ಸ್ಪಷ್ಟವಾಗಿ ತಿಳಿಸಿರಲಿಲ್ಲ.
ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಅವರ ಕ್ಷೇತ್ರದಲ್ಲೇ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ) ಪರಾಭವಗೊಳಿಸಿರುವುದು ಗಮನಾರ್ಹ.
ದೆಹಲಿಯಲ್ಲಿ ಹೊಸ ರಾಜಕೀಯ ಶಕ್ತಿಯಾಗಿ ಎಎಪಿ ಹೊರಹೊಮ್ಮುವುದಾಗಿ ಈ ಸಮೀಕ್ಷೆಗಳು ಹೇಳುವಲ್ಲಿ ಯಶಸ್ವಿಯಾಗಿದ್ದರೂ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪಕ್ಷವು ಸಾರ್ವಜನಿಕ ಬೆಂಬಲ ಪಡೆಯುವುದು ಎಂದು ಇವು ಊಹಿಸಿರಲಿಲ್ಲ.
70 ಸದಸ್ಯ ಬಲದ ದೆಹಲಿ ವಿಧಾನಸಭೆಯ 28 ಸ್ಥಾನಗಳನ್ನು ಗೆದ್ದಿರುವ ಎಎಪಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 31 ಮತ್ತು 8 ಸ್ಥಾನಗಳಿಗೆ ಮಾತ್ರ ತೃಪ್ತಿ ಪಡಬೇಕಾಗಿದೆ.
ಎಎಪಿಗೆ ಸಿ’ವೊಟರ್ಸ್, ಎಸಿ’ನೀಲ್ಸನ್ ಮತ್ತು ಆರ್ಗ್ಮಾರ್ಗ್ 8–16 ಸ್ಥಾನ ನೀಡಿದ್ದು, ಆದರೆ ಈಗ ಗೆದ್ದಿರುವಷ್ಟು ದೊಡ್ಡ ಅಂತರವನ್ನು ಹೇಳಿರಲಿಲ್ಲ. ಟುಡೇ’ಯ ಚಾಣಕ್ಯವು ಎಎಪಿಗೆ 31 ಸ್ಥಾನ ಹೇಳಿದ್ದರೂ, 9 ಸ್ಥಾನಗಳ ಅಂತರವನ್ನು ತಿಳಿಸಿತ್ತು. ಸಿಎನ್ಎನ್–ಐಬಿಎನ್ –ಎಸ್ಡಿಎಸ್–ದಿ ವೀಕ್ ಸಮೀಕ್ಷೆಗಳು ಕೂಡ ಇದೇ ರೀತಿ ಅಂದಾಜಿಸಿದ್ದವು.
ಇತರ ಮೂರು ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸಗಡದಲ್ಲಿ ಬಿಜೆಪಿ ಬಹುಮತ ಪಡೆಯುವ ಮತ್ತು ಕಾಂಗ್ರೆಸ್ ದೂಳಿಪಟವಾಗುವ ಅಂದಾಜನ್ನು ಸಮೀಕ್ಷೆಗಳು ಮಾಡಿದ್ದವು. ಆದರೆ ಕೇಸರಿ ಪಕ್ಷಕ್ಕೆ ಈಗ ಸಿಕ್ಕಿರುವಷ್ಟು ದೊಡ್ಡ ಬಹುಮತವನ್ನು ಯಾವುದೂ ತಿಳಿಸಿರಲಿಲ್ಲ.