ಗುಂಡ್ಲುಪೇಟೆ: ಖಾಸಗಿ ಬಸ್ಗಳು ಸರ್ಕಾರಿ ಬಸ್ ನಿಲ್ದಾಣದ ಸಮೀಪವೇ ನಿಂತು ಜನರನ್ನು ಕರೆದೊಯ್ಯುವುದರಿಂದ, ಸರ್ಕಾರಿ ಬಸ್ಗಳ ಆದಾಯಕ್ಕೆ ಕತ್ತರಿ ಬೀಳುವುದಲ್ಲದೇ ಪಾದಚಾರಿಗಳಿಗೆ ಹಾಗೂ ಪಟ್ಟಣದ ನಾಗರಿಕರಿಗೆ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಬೇಕೆಂದು ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಮೇಶ ನಾಯಕ ಆಗ್ರಹಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದಿಂದ ಭಾನುವಾರ ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ಹಮ್ಮಿ ಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮೈಸೂರು-ಗುಂಡ್ಲುಪೇಟೆ ಮಾರ್ಗದಲ್ಲಿ ಸರ್ಕಾರಿ ಬಸ್ಸೌಕರ್ಯ ಇದ್ದರೂ ಈಚಿನ ದಿನಗಳಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಾರ್ಗದಲ್ಲಿ ಪ್ರಯಾಣಿಸುತ್ತಿರುವುದರಿಂದ ಹೆಚ್ಚಿನ ಬಸ್ಗಳ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು.
ಪಟ್ಟಣ ಘಟಕದ ಅಧ್ಯಕ್ಷ ಸುರೇಶ್ನಾಯಕ ಮಾತನಾಡಿ, ಹೊರರಾಜ್ಯದ ಬಸ್ಗಳು ಸರ್ಕಾರಿ ನಿಲ್ದಾಣದ ಒಳಗಡೆ ನಿಲ್ಲುವಂತೆ ಆದೇಶ ನೀಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ನಿಲ್ದಾಣದ ಹೊರಗೆ ನಿಲ್ಲುವುದರಿಂದ ಪ್ರಯಾಣಿಕರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗಿದೆ ಎಂದರು.
ಈ ಬಗ್ಗೆ ಶೀಘ್ರವಾಗಿ ಕ್ರಮಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡದಿದ್ದರೆ ಸಂಘಟನೆ ವತಿಯಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಬೇಕಾಗುತ್ತದೆ. ಇದಕ್ಕೆ ಅವಕಾಶ ನೀಡದೆ ತಮ್ಮ ಮನವಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ನಂತರ ಗುಂಡ್ಲುಪೇಟೆ ಬಸ್ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ನಾಗರಾಜು,ಉಸ್ಮಾನ್,ಜಗ್ಗ, ಗಣೇಶ, ರಾಜೇಂದ್ರ, ವಿನಾಯಕ್, ನಾಗೇಂದ್ರ ಉಪಾಧ್ಯಕ್ಷ ಶ್ರೆನಿವಾಸನಾಯ್ಕ ಭಾಗವಹಿಸಿದ್ದರು.