ರಾಜರಾಜೇಶ್ವರಿನಗರ: ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಹಣ ಸಂಪಾದನೆ ಮಾಡುವ ಕೇಂದ್ರಗಳಾಗಿವೆ. ಮಕ್ಕಳಿಗೆ ಅಕ್ಷರ ಕಲಿಸುವುದನ್ನು ಬಿಟ್ಟರೆ ಮಾನವೀಯ ಮೌಲ್ಯ, ದೇಶಪ್ರೇಮ ಸೇರಿದಂತೆ ಏನನ್ನೂ ಹೇಳಿಕೊಡುವುದಿಲ್ಲ ಎಂದು ಬಿಬಿಎಂಪಿ ಸದಸ್ಯ ಜಿ.ಎಚ್.ರಾಮಚಂದ್ರ ಹೇಳಿದರು.
ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ವಿಜಯ ಅಕಾಡೆಮಿಯ 19ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಖಾಸಗಿ ಶಿಕ್ಷಣ ಸಂಸ್ಥೆಗಳು, ಡೊನೇಷನ್, ಮಾಸಿಕ ಶುಲ್ಕ ಸೇರಿದಂತೆ ಹಲವು ರೀತಿಯಲ್ಲಿ ಹಣ ವಸೂಲಿ ಮಾಡಿ ಪೋಷಕರ ರಕ್ತ ಹೀರುವ ಕೆಲಸ ಮಾಡುತ್ತಿವೆ ಎಂದರು.
ವಿಜಯ ಅಕಾಡೆಮಿ ಸಂಸ್ಥೆಯ ಬಸವಾನಂದ ಪ್ರಕಾಶ್, ಯಶಸ್ವಿನಿ ಇಂಟರ್ನಾಷ್ಯನಲ್ ಶಾಲೆಯ ಪ್ರಾಂಶುಪಾಲ ಬಿ.ವಿ. ನಾಗರಾಜು ಹಾಜರಿದ್ದರು. ಕರ್ನಾಟಕ ಮತ್ತು ಕೇರಳ ವಿಭಾಗದ ರಕ್ಷಣಾ ಇಲಾಖೆಯ ಸಿಬ್ಬಂದಿ, ಅಧಿಕಾರಿ ಕೆ.ಜೆ.ಸಿ. ಜೆಲ್ಡೊ, ಉದ್ಯಮಿ ಡಿ.ಎನ್.ಕಿರಣ್ ಮತ್ತಿತರರು ಮಾತನಾಡಿದರು. ರಾಷ್ಟ್ರೀಯ ಪ್ರಶಸ್ತಿ ವಿಜೇತ ಶಿಕ್ಷಕಿ ಪದ್ಮಿನಿ ದಂಪತಿಯನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.