ಜನವರಿ ಬಂತೆಂದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಹಬ್ಬದ ಸಂಭ್ರಮ. ಶಾಲೆಗಳಲ್ಲಿ ಮಕ್ಕಳಿಗೆ ಸೀಟು ಕೊಡಲು ಪೋಷಕರನ್ನು ಸುಲಿಗೆ ಮಾಡಲು ಸಕಾಲ.
ಈ ವರ್ಷವೂ ನಮ್ಮ ಶಿಕ್ಷಣ ಸಚಿವರು ಡೊನೇಷನ್ ಹಾವಳಿ ತಡೆಯುವ ಮಾಮೂಲು ಹೇಳಿಕೆ ನೀಡಿದ್ದಾರೆ. ಇವರಷ್ಟೇ ಅಲ್ಲ, ಹಿಂದಿನ ಸರ್ಕಾರಗಳ ಶಿಕ್ಷಣ ಸಚಿವರು ಹೀಗೇ ಹೇಳುತ್ತಿದ್ದರು. ಆದರೂ ಹಗಲು ದರೋಡೆ ನಡೆಯುತ್ತಲೇ ಇದೆ.
ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸಲು ಶ್ರಿಮಂತರಷ್ಟೇ ಅಲ್ಲ, ಬಡ ಕೂಲಿಕಾರ ಪಾಲಕರೂ ಹಾತೊರೆಯುತ್ತಾರೆ. ಈ ಪ್ರವೃತ್ತಿ ಬೆಂಗಳೂರಿಗೆ ಸೀಮಿತವಲ್ಲ. ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ಇಂಗ್ಲಿಷ್ ಶಿಕ್ಷಣ ಸಂಸ್ಥೆಗಳು ಇದನ್ನೇ ಬಂಡವಾಳ ಮಾಡಿಕೊಂಡು ಹಣ ಸುಲಿಗೆ ಮಾಡುತ್ತಿವೆ.
ಈ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಸಚಿವರು ಪತ್ರಿಕಾ ಹೇಳಿಕೆ ಕೊಡುವುದನ್ನು ಬಿಟ್ಟು ರಾಜ್ಯದ ಎಲ್ಲಾ ಮಕ್ಕಳಿಗೆ ಏಕರೂಪ ಶಿಕ್ಷಣ ಸಿಗುವಂತೆ ಕಾರ್ಯಕ್ರಮ ರೂಪಿಸಬೇಕು. ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಜಾರಿಗೆ ಬಂದರೆ ಈ ಪಿಡುಗು ನಿಯಂತ್ರಣಕ್ಕೆ ಬರಬಹುದೇನೋ..