`ಖೇಲ್ರತ್ನ ಪ್ರಶಸ್ತಿಗೆ ದ್ರಾವಿಡ್ ಹಾಗೂ ಅರ್ಜುನ ಪ್ರಶಸ್ತಿಗೆ ಯುವರಾಜ್ ಹೆಸರನ್ನು ಶಿಫಾರಸು ಮಾಡಿದ್ದೇವೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಮುಂದಿನ ವಾರ ಮಾಹಿತಿ ನೀಡುವೆವು~ ಎಂದು ಬಿಸಿಸಿಐ ಮುಖ್ಯ ಆಡಳಿತಾಧಿಕಾರಿ ರತ್ನಾಕರ ಶೆಟ್ಟಿ ತಿಳಿಸಿದರು. ಕ್ರೀಡಾಳುಗಳ ಹೆಸರನ್ನು ಶಿಫಾರಸು ಮಾಡುವ ಅಂತಿಮ ದಿನಾಂಕವನ್ನು ಸರ್ಕಾರ ಇತ್ತೀಚೆಗೆ ಜುಲೈ 20ರ ವರೆಗೆ ವಿಸ್ತರಿಸಿತ್ತು.
ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ 23,000 ಕ್ಕೂ ಅಧಿಕ ರನ್ ಪೇರಿಸಿರುವ ದ್ರಾವಿಡ್ ಕೆಲ ತಿಂಗಳ ಹಿಂದೆ ನಿವೃತ್ತಿ ಪ್ರಕಟಿಸಿದ್ದರು. 39ರ ಹರೆಯದ ದ್ರಾವಿಡ್ಗೆ ಪ್ರಶಸ್ತಿ ಒಲಿದರೆ, ಈ ಪ್ರತಿಷ್ಠಿತ ಗೌರವ ಪಡೆದ ಮೂರನೇ ಕ್ರಿಕೆಟ್ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಸಚಿನ್ ತೆಂಡೂಲ್ಕರ್ (1997-98) ಮತ್ತು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ (2007-08) ಈಗಾಗಲೇ ಖೇಲ್ರತ್ನ ಪ್ರಶಸ್ತಿ ಪಡೆದಿದ್ದಾರೆ. ಸರ್ಕಾರ 1991-92 ರಲ್ಲಿ ಆರಂಭಿಸಿದ್ದ ಈ ಪ್ರಶಸ್ತಿಯನ್ನು ಇದುವರೆಗೆ 20 ಕ್ರೀಡಾಳುಗಳು ಪಡೆದಿದ್ದಾರೆ.
ಭಾರತ ತಂಡ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡುವ ನಿರ್ಧಾರವನ್ನು ಬಿಸಿಸಿಐ ಕೈಗೊಂಡಿದೆ. ಕ್ಯಾನ್ಸರ್ನಿಂದ ಬಳಲಿದ್ದ `ಯುವಿ~ ಇದೀಗ ಚೇತರಿಸಿಕೊಂಡಿದ್ದು, ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ನಲ್ಲಿ ಅಭ್ಯಾಸವನ್ನು ಆರಂಭಿಸಿದ್ದಾರೆ.