ಪಾವಗಡ: ಪಟ್ಟಣದಲ್ಲಿ ಗುರುವಾರ ವಿಜೃಂಭಣೆ ಯಿಂದ ಗಡಿನಾಡ ಸಾಂಸ್ಕೃತಿಕ ಉತ್ಸವ ನಡೆಯಿತು.ಉತ್ಸವದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ನೆರವೇರಿಸಿದರು. ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿ ಮೆರವಣಿಗೆಗೆ ರಂಗು ನೀಡಿದವು.
ನಾಗಸ್ವರ ವಾದನ, ನಂದಿ ಧ್ವಜಕುಣಿತ, ತಮಟೆ ಹಾಗೂ ಚೆಕ್ಕೆಭಜನೆ, ಚರ್ಮವಾದ್ಯ ಮೇಳ, ಕೋಲಾಟ ಹಾಗೂ ವೀರಗಾಸೆ ತಂಡಗಳು ಪಟ್ಟಣದ ಜನತೆಯನ್ನು ರಂಜಿಸಿದವು. ಎಸ್ಎಸ್ಕೆ ರಂಗಮಂದಿರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ಆಕರ್ಷಕವಾಗಿದ್ದವು. ಕಾರ್ಯಕ್ರಮ ಉದ್ಘಾಟಿಸಿದ ಸತ್ಯದರ್ಶನ ಖ್ಯಾತಿಯ ಪಾವಗಡ ಪ್ರಕಾಶರಾವ್, ಕನ್ನಡತನ ಉಳಿಯಲು ಸರ್ಕಾರ ಗಡಿಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕು ಎಂದರು.
ಭಾಷೆ ಬಗ್ಗೆ ಸಂಕಲ್ಪ ತೊಡಬೇಕು. ಕರ್ನಾಟಕ ಶ್ರೀಮಂತ ದೇಶ, ತನ್ನದೇ ಆದ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಕೂಡಿದೆ ಎಂದು ತಿಳಿಸಿದರು.ಅಜೀಂ ಪ್ರೇಂಜೀ ಹಾಗೂ ನಾರಾಯಣಮೂರ್ತಿ ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿದ್ದಾರೆ. ಅಮೇರಿಕದಲ್ಲಿ ಭಾರತೀಯರು ತಮ್ಮ ಬುದ್ದಿ ಮತ್ತೆಯಿಂದ ಪ್ರಮುಖ ಸ್ಥಾನ ಹೊಂದಿದ್ದಾರೆ. ಆದರೆ ಕನ್ನಡದ ಖ್ಯಾತಿ ವಿಶ್ವದೆಲ್ಲಡೆ ಹರಡಿದ್ದರೂ ಕರ್ನಾಟಕದಲ್ಲಿ ಕನ್ನಡ ನರಳುತ್ತಿದೆ ಎಂಬ ಮಾತುಗಳು ಸರಿಯಲ್ಲ ಎಂದು ಹೇಳಿದರು.
ಗಡಿಯಲ್ಲಿ ಕನ್ನಡ ಕಾಯುವುದು ಪ್ರಮುಖವಲ್ಲ. ಮನೆಯಲ್ಲಿ ಕನ್ನಡವನ್ನು ಕಾಯಬೇಕು. ಆಗ ಕರ್ನಾಟಕ ಕನ್ನಡವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ತಿಳಿಸಿದರು.ಕಾರ್ಯಕ್ರಮದಲ್ಲಿ ಜಿ.ಎಸ್.ಧರ್ಮಪಾಲ್, ಉಪವಿಭಾಗಾಧಿಕಾರಿ ಅನುರಾಗ್ತಿವಾರಿ, ಕುಂ.ವೀರಭದ್ರಪ್ಪ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಚಂದ್ರಪ್ಪ, ಜಂಪಯ್ಯ, ಎಂ.ನಾಗೇಂದ್ರಪ್ಪ ಭಾಗವಹಿಸಿದ್ದರು.