ಬೀದರ್: ಬಸವಕಲ್ಯಾಣ ಸಾರಿಗೆ ಕಚೇರಿಯಲ್ಲಿ ಗಣಕೀಕೃತ ಸ್ಮಾರ್ಟ್ ಕಾರ್ಡ್ ಸೇವೆ ಆರಂಭಿಸಲಾಗಿದೆ.
ಗುಲ್ಬರ್ಗದ ಉಪಸಾರಿಗೆ ಆಯುಕ್ತ ಆರ್. ರುದ್ರನಾಯ್ಕ ಅವರು ಬುಧವಾರ ಸೇವೆಗೆ ಚಾಲನೆ ನೀಡಿದರು.
ಸಾರಿಗೆ ಇಲಾಖೆಯ ವತಿಯಿಂದ ರಾಜ್ಯದ ಸಾರಿಗೆ ಕಚೇರಿಗಳಲ್ಲಿ ಗಣಕೀಕೃತ ಸೇವೆಯನ್ನು ಸ್ಮಾರ್ಟ್ ಕಾರ್ಡ್ ನೀಡುವ ಮೂಲಕ ಜಾರಿಗೆ ತರುವ ಯೋಜನೆ ಪ್ರಾರಂಭಿಸಲಾಗಿದೆ. ಚಾಲನಾ ಅನುಜ್ಞಾ ಪತ್ರ ಮತ್ತು ನೋಂದಣಿ ಪತ್ರದ ನಮೂನೆಯ ಸ್ಮಾರ್ಟ್ ಕಾರ್ಡ್ ಮೈಕ್ರೋಪ್ರೊಸೆಸರ್ 16 ಕಿಲೋ ಬೈಟ್ ರ್ಯಾಮ್ನ ಚಿಪ್ ಒಳಗೊಂಡಿರುವ ಪ್ಲಾಸ್ಟಿಕ್ ಕಾರ್ಡ್ ಆಗಿರುತ್ತದೆ.
ಸ್ಮಾರ್ಟ್ ಕಾರ್ಡ್ ಡಿಜಿಟಲ್ ರೂಪದ ಮಾಹಿತಿ ಶೇಖರಣೆ, ಸುಲಭದಲ್ಲಿ ಮಾಹಿತಿ ಲಭ್ಯತೆ, ಅಳಿಸಲಾರದ ಮಾಹಿತಿ, ಭದ್ರತೆಯ ನಿರ್ವಹಣೆ, ವಾಹನಗಳ ಹಾಗೂ ಚಾಲನಾ ಅನುಜ್ಞಾ ಪತ್ರಗಳ ಕೇಂದ್ರೀಕೃತ ರಾಜ್ಯ ಮತ್ತು ರಾಷ್ಟ್ರೀಯ ಅಂಕಿ-ಅಂಶಗಳನ್ನು ಒಳಗೊಂಡಿರುತ್ತದೆ. ಈ ಸ್ಮಾರ್ಟ್ ಕಾರ್ಡ್ ಒಂದು ಗುರುತಿನ ಚೀಟಿಯೂ ಆಗಿರುತ್ತದೆ ಎಂದರು.
ಇದಕ್ಕೆ ರೂ. 200 ಶುಲ್ಕ ನಿಗದಿಪಡಿಸಲಾಗಿದೆ. ಸ್ಮಾರ್ಟ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ನೀಡಿದ ದಿನಾಂಕದಿಂದ ಒಂದು ವರ್ಷದ ಅವಧಿಗೆ ರೂ. 1 ಲಕ್ಷ ಮರಣ ವಿಮೆ ಮತ್ತು ರೂ. 50 ಸಾವಿರ ಶಾಶ್ವತ ಅಂಗವಿಕಲತೆ ವಿಮೆ ಹೊಂದಿರುತ್ತದೆ. ಈಗ ಪ್ರಸ್ತುತ ಇರುವ ಚಾಲನಾ ಅನುಜ್ಞಾ ಪತ್ರ ಮತ್ತು ನೋಂದಣಿ ಪುಸ್ತಕಗಳನ್ನು ಸ್ಮಾರ್ಟ್ ಕಾರ್ಡ್ ರೂಪಕ್ಕೆ ಪರಿವರ್ತಿಸಿಕೊಳ್ಳಬೇಕಾಗಿರುತ್ತದೆ.
ಅನುಜ್ಞಾ ಪತ್ರಧಾರಕನು ಮಾಡುವ ಸಂಚಾರಿ ಉಲ್ಲಂಘನೆಗಳನ್ನು ಈ ಕಾರ್ಡ್ನಲ್ಲಿ ಶೇಖರಿಸುವ ಸೌಲಭ್ಯವಿದೆ. ಇದಲ್ಲದೆ, ರಸ್ತೆ ಅಪಘಾತಗಳ ಆರೋಪ ಸಾಬೀತು ವಿವರಗಳನ್ನು ಸಹ ಶೇಖರಿಸಬಹುದಾಗಿದೆ ಎಂದು ಹೇಳಿದರು.
ಸ್ಮಾರ್ಟ್ ಕಾರ್ಡ್ ಕಳೆದುಹೋದಲ್ಲಿ ನಿಯಮನುಸಾರ ಪರಿಶೀಲಿಸಿ ಅಗತ್ಯ ಪಾವತಿಯ ಮೇರೆಗೆ ಹೊಸ ಕಾರ್ಡ್ ನೀಡಬಹುದಾಗಿದೆ. ಸ್ಮಾರ್ಟ್ ಕಾರ್ಡ್ನಿಂದ ದಾಖಲೆಯ ಅನಧೀಕೃತ ನಕಲು ಸಷ್ಟಿಸುವುದನ್ನು ತಡೆಗಟ್ಟಬಹುದಾಗಿದೆ. ವಾಹನ ಚಾಲಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಸಹಾಯಕ ಪ್ರಾದೇಶಿಕ ಆಯುಕ್ತ ಎಂ.ಬಿ. ಕಾಳೆ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.