ಬೆಂಗಳೂರು: ಪೊಲೀಸ್ ಸಿಬ್ಬಂದಿ ಸೋಗಿನಲ್ಲಿ ದುಷ್ಕರ್ಮಿಗಳು ಮಹಿಳೆಯ ಗಮನ ಬೇರೆಡೆ ಸೆಳೆದು ಸುಮಾರು 1.50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಕೊಟ್ಟಿಗೆಪಾಳ್ಯ ಬಸ್ ನಿಲ್ದಾಣದ ಬಳಿ ಮಂಗಳವಾರ ಸಂಜೆ ನಡೆದಿದೆ.
ಈ ಸಂಬಂಧ ಕೊಟ್ಟಿಗೆಪಾಳ್ಯ ನಿವಾಸಿ ಪುಟ್ಟತಾಯಮ್ಮ ಎಂಬುವರು ದೂರು ಕೊಟ್ಟಿದ್ದಾರೆ. ಬಿಎಸ್ಎನ್ಎಲ್ ಕಚೇರಿಯ ಬಸವೇಶ್ವರನಗರ ಶಾಖೆಯಲ್ಲಿ ಉದ್ಯೋಗಿಯಾಗಿರುವ ಅವರು ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಕಿಡಿಗೇಡಿಗಳು ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಎಂಟಿಸಿ ಬಸ್ನಲ್ಲಿ ಬಂದ ಪುಟ್ಟತಾಯಮ್ಮ ಅವರು ಕೊಟ್ಟಿಗೆಪಾಳ್ಯ ನಿಲ್ದಾಣದಲ್ಲಿ ಇಳಿದು ಮನೆಗೆ ನಡೆದು ಹೋಗುತ್ತಿದ್ದರು. ಅಲ್ಲಿಗೆ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು, `ಮುಂದೆ ಮಹಿಳೆಯ ಕೊಲೆಯಾಗಿದೆ. ಆಭರಣಗಳನ್ನು ಬಿಚ್ಚಿ ಬ್ಯಾಗ್ನಲ್ಲಿ ಇಟ್ಟುಕೊಳ್ಳಿ~ ಎಂದು ಹೇಳಿದರು.
ಇದನ್ನು ನಂಬಿದ ಅವರು ಎರಡು ಸರಗಳನ್ನು ಬಿಚ್ಚಿ ಬ್ಯಾಗ್ನಲ್ಲಿ ಇಟ್ಟುಕೊಳ್ಳಲು ಮುಂದಾದರು. ಅವರಿಗೆ ನೆರವು ನೀಡುವ ನೆಪದಲ್ಲಿ ಸರಗಳನ್ನು ಪಡೆದ ದುಷ್ಕರ್ಮಿಗಳು ಅವುಗಳನ್ನು ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿದಂತೆ ಮಾಡಿ, ಆ ಕವರ್ ಅನ್ನು ಪುಟ್ಟತಾಯಮ್ಮನಿಗೆ ಕೊಟ್ಟು ಪರಾರಿಯಾಗಿದ್ದಾರೆ. ಅವರು ಮನೆಗೆ ಹೋಗಿ ಕವರ್ ತೆರೆದು ನೋಡಿದಾಗ ಸರಗಳು ಇಲ್ಲದಿರುವುದು ಗೊತ್ತಾಗಿದೆ.