ಬೆಂಗಳೂರು: ಭೀಕರ ನೆರೆ ಹಾವಳಿಯಲ್ಲಿ ಸಂತ್ರಸ್ತರಾದ ಉತ್ತರಾಖಂಡದ ಜನತೆಗೆ ಸೊಷೆಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ಯುಸಿಐಸಿ -ಕಮ್ಯುನಿಸ್ಟ್) ತನ್ನ ವೈದ್ಯಕೀಯ ಘಟಕದಿಂದ ಚಿಕಿತ್ಸಾ ವ್ಯವಸ್ಥೆ ಮಾಡಿದೆ.
ಡಾ. ಅನ್ಷುಮನ್ ಮಿತ್ರ ಅವರ ನೇತೃತ್ವದಲ್ಲಿ ರುದ್ರಪ್ರಯಾಗದ ಪ್ರಮುಖ ಮಾರುಕಟ್ಟೆ ಸಂಕೀರ್ಣದಲ್ಲಿ ಪ್ರಧಾನ ಶಿಬಿರ ಪ್ರಾರಂಭಿಸಲಾಗಿದೆ. ಸಂತ್ರಸ್ತ ಹಳ್ಳಿಗಳಲ್ಲಿ ಚಿಕಿತ್ಸೆ ನೀಡಲು ಸಂಚಾರಿ ತಂಡಗಳನ್ನು ಗುಡ್ಡಗಾಡಿನ ಹಳ್ಳಿಗಳಿಗೆ ಕಳುಹಿಸಲಾಗಿದೆ.
ಇದುವರೆಗೂ 37 ಶಿಬಿರಗಳನ್ನು ವ್ಯವಸ್ಥೆ ಮಾಡಲಾಗಿದೆ. ಸುಮಾರು 250 ಹಳ್ಳಿಗಳಲ್ಲಿ 5,000 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಸುಮಾರು ರೂ 7.5 ಲಕ್ಷ ಮೊತ್ತದ ಔಷಧಿಯನ್ನು ವಿತರಿಸಲಾಗಿದೆ.
ಎಲ್ಲೆಡೆ ನೀರಿನಿಂದ ಹರಡುವ ರೋಗಗಳು ಪ್ರಮುಖವಾಗಿ ಕಂಡು ಬಂದಿವೆ. ಕಾಮಾಲೆ, ವಾಂತಿಭೇದಿ, ಜಂತು ಹುಳುಗಳು ಹೆಚ್ಚಾಗಿವೆ. ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಸಮಸ್ಯೆ ಉಲ್ಬಣಿಸಿದೆ. ಜನಗಳಲ್ಲಿ ಜಾಗೃತಿ ಉಂಟುಮಾಡಲು ಪ್ರಯತ್ನಿಸಲಾಗುತ್ತಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ಆಘಾತ ವ್ಯಾಪಕವಾಗಿ ಯಾರ ಮನೆಗಳಲ್ಲಿ ವ್ಯಕ್ತಿಗಳು ಕಾಣೆಯಾಗಿದ್ದಾರೊ ಅಂತಹವರು ಮಾನಸಿಕ ಆಘಾತಕ್ಕೆ ಒಳಗಾಗಿದ್ದು ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್ಯುಸಿಐಸಿ ಪ್ರಕಟಣೆ ತಿಳಿಸಿದೆ.