ನವದೆಹಲಿ (ಪಿಟಿಐ): ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ರಾಜಧಾನಿ ಬಾಂಗಿ ವಿಮಾನ ನಿಲ್ದಾಣದ ಬಳಿ ಕಳೆದ ತಿಂಗಳು ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಆರು ಭಾರತೀಯರನ್ನು ಭಾನುವಾರ ಮುಂಜಾನೆ ನವದೆಹಲಿಗೆ ಕರೆತಲಾಗಿದೆ. ಅವರನ್ನು ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಎಐಐಎಂಎಸ್) ದಾಖಲಿಸಲಾಗಿದೆ.
ಚಾದ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಫ್ರಾನ್ಸ್ನ ವಿಶೇಷ ವಿಮಾನದಲ್ಲಿ ನವದೆಹಲಿಗೆ ಕರೆತರಲಾಯಿತು. ವಿಮಾನ ನಿಲ್ದಾಣದಿಂದ ನೇರವಾಗಿ `ಎಐಐಎಂಎಸ್'ಗೆ ರವಾನಿಸಲಾಯಿತು. ಗಾಯಾಳುಗಳ ಆರೋಗ್ಯ ಗಂಭೀರ ಸ್ಥಿತಿಯಲ್ಲೇನೂ ಇಲ್ಲ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಬಾಂಗಿ ವಿಮಾನ ನಿಲ್ದಾಣಕ್ಕೆ ಮಾರ್ಚ್ 25ರಂದು ವಾಹನದಲ್ಲಿ ಬರುತ್ತಿದ್ದವರನ್ನು ಬಂಡುಕೋರರು ಎಂದು ತಪ್ಪಾಗಿ ಭಾವಿಸಿದ ಫ್ರಾನ್ಸ್ ಯೋಧರು ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಕರ್ನಾಟಕದ ಕುಂದಾಪುರ ತಾಲ್ಲೂಕಿನ ಕೃಷ್ಣಯ್ಯ ಮೊಗವೀರ ಸೇರಿ ಇಬ್ಬರು ಭಾರತೀಯರು ಸಾವನ್ನಪ್ಪಿದ್ದರು. ಇತರ ಆರು ಭಾರತೀಯರು ಗಾಯಗೊಂಡಿದ್ದರು.