ಬೆಂಗಳೂರು: ಗುಜುರಿ ಸಾಮಾನು ತುಂಬಿದ್ದ ಮಳಿಗೆಯಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ದುರಂತದಿಂದ ಅಪಾರ ಪ್ರಮಾಣದ ಗುಜುರಿ ವಸ್ತುಗಳು ಭಸ್ಮವಾದ ಘಟನೆ ಬಾಣಸವಾಡಿ ಸಮೀಪದ ವರ್ತುಲ ರಸ್ತೆ ಬಳಿ ಶುಕ್ರವಾರ ನಡೆದಿದೆ.
ಇಲ್ಲಿನ ನಂದವನಂ ಕಾಲೋನಿಯ ಹಿಂಭಾಗದಲ್ಲಿರುವ ಅಕ್ಷಯ ಸ್ಟೀಲ್ ಎಂಟರ್ಪ್ರೈಸಸ್ ಎಂಬ ಗುಜುರಿ ಅಂಗಡಿಯಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಬೆಂಕಿ ಕಾಣಿಸಿಕೊಂಡಿತು. ಒಂಬತ್ತು ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಆರು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ಘಟನೆಯಿಂದ ಯಾವುದೇ ಸಾವು- ನೋವುಗಳು ಸಂಭವಿಸಿಲ್ಲ ಎಂದು ನಗರ ಪೂರ್ವ ವಿಭಾಗದ ಅಗ್ನಿಶಾಮಕ ಮುಖ್ಯಸ್ಥ ಕೆ.ಯು ರಮೇಶ್ ತಿಳಿಸಿದರು.
ಹೋಟೆಲ್ಗೆ ಬೆಂಕಿ: ಅಗ್ನಿ ಅನಾಹುತ ಸಂಭವಿಸಿ ಹೊಟೇಲ್ ಒಂದು ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಶಾಂತಿನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ. ವಜೀದ್ ಎಂಬ ಮಾಂಸಹಾರಿ ಹೊಟೇಲ್ ಸುಟ್ಟುಹೋಗಿದ್ದು ಯಾವುದೇ ಸಾವು ನೋವು ಸಂಭವಿಸಿಲ್ಲ. ಮಾಂಸ ಸುಡಲು ಉರಿಯನ್ನು ಹೆಚ್ಚಿಸಿದ್ದರಿಂದ ಅನಿರೀಕ್ಷಿತವಾಗಿ ಇಡೀ ಕೋಣೆಗೆ ಬೆಂಕಿ ಹತ್ತಿದ್ದು, ನಂತರ ಇಡೀ ಹೊಟೇಲನ್ನೇ ಆಹುತಿ ತೆಗೆದುಕೊಂಡಿದೆ ಎಂದು ಅಶೋಕ ನಗರ ಪೊಲೀಸರು ತಿಳಿಸಿದ್ದಾರೆ.