ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಗರಿಮೆಯ ಗಾಯನ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಲಯ ಲಾಸ್ಯ

ಮೇಲ್‌ಶತಿಯಲ್ಲಿ ಉತ್ತಮ ಕಂಠಸಿರಿಯ ಗಾಯನ ಆಸ್ವಾದನೀಯ. ಕರ್ನಾಟಕ ಕಾಲೇಜ್ ಆಫ್ ಪರ್ಕಷನ್‌ನ 46ನೇ ವಾರ್ಷಿಕ ಸಂಗೀತೋತ್ಸವದ ಉಪಾಂತ್ಯ ದಿನ ಅನನ್ಯ ಸಭಾಂಗಣದಲ್ಲಿ ತುಂಬಿದ್ದ ಸಂಗೀತ ಪ್ರೇಮಿಗಳಿಗೆ ಅಂತಹ ಸವಿಶೇಷ ಅನುಭವವನ್ನು ಹಿರಿಯ ಹಾಗೂ ಬಹು ಕೌಶಲ್ಯದ ಗಾಯಕಿ ಆರ್.ಎ. ರಮಾಮಣಿ ಒದಗಿಸಿದರು.

ಶಾಸ್ತ್ರೀಯ ಸಂಗೀತದ ವೈಶಿಷ್ಟ್ಯಗಳ ಸಾರಸಂಗ್ರಹದ ಅಡಕ, ಸುಸ್ಪಷ್ಟ ಸಂಗೀತ ಕಲ್ಪನೆ, ಲಯ ವೈವಿಧ್ಯದ ಕಲಾತ್ಮಕತೆ, ಸಾಹಿತ್ಯದ ಭಾವಪೂರ್ಣ ನಿರೂಪಣೆ ಇತ್ಯಾದಿ ಗುಣಗರಿಮೆಗಳಿಂದ ಅವರ ಗಾಯನ ರುಚಿಸಿತು. ಗಹನವಾಗಿದ್ದ ರಾಗಗಳು ಮತ್ತು ಕತಿಗಳು ಸಂಗೀತ ಸೌಂದರ್ಯ ಮತ್ತು ಕಲಾತ್ಮಕ ಏಕತೆಯನ್ನು ಗಟ್ಟಿಗೊಳಿಸಿದವು.
 
ಚಾರುಲತಾ ರಾಮಾನುಜಂ (ಪಿಟೀಲು), ತಿರುಪತಿ ಸುಧಾಕರ್ (ಮೃದಂಗ) ಮತ್ತು ಸುಕನ್ಯಾ ರಾಂಗೋಪಾಲ್ (ಘಟ) ಅವರ ಒಪ್ಪ ಓರಣಗಳ ಸಹಕಾರದೊಂದಿಗೆ ರಮಾಮಣಿ ಅವರು ಚುರುಕಾಗಿ ಬೇಗಡೆ ವರ್ಣದೊಂದಿಗೆ ತಮ್ಮ ಕಛೇರಿಯನ್ನು ಆರಂಭಿಸಿದರು.

ಪ್ರಣಮಾಮ್ಯಹಂ (ಗೌಳ) ಕಲ್ಪನಾಸ್ವರಗಳ ಮೆರುಗನ್ನು ಪಡೆದುಕೊಂಡಿತು. ಆಂದೋಳಿಕ (ರಾಗಸುಧಾರಸ), ದೇವಗಾಂಧಾರಿ (ವಿನರಾದ ನಾಮನವಿ) ಮತ್ತು ತೋಡಿ (ಶ್ರೀಕಷ್ಣಂ ಭಜಮಾನಸ) ರಾಗಗಳು ಎಲ್ಲಾ ಸ್ಥಾಯಿಗಳಲ್ಲೂ ಚಲ್ಲವರಿದು ಅವುಗಳ ಚಿತ್ರಣ ಸಮಗ್ರ ಸಂಪೂರ್ಣವಾಯಿತು. ಲತಾಂಗಿ ಮತ್ತು ವಾಚಸ್ಪತಿ ರಾಗಗಳಲ್ಲಿ ಹಾಡಲಾಗುವ ತ್ಯಾಗರಾಜರ ಕಂಠಜೂಡುಮೇ (ವಾಚಸ್ಪತಿ) ಕೃತಿಯನ್ನು ಅಲನಾಡು ಸೌಮಿತ್ರಿ ಎಂಬಲ್ಲಿ ನೆರೆವಲ್ ಮಾಡಿ ಸ್ವರಗಳಿಂದ ಅಲಂಕೃತಗೊಳಿಸಿದರು. ಇವುಗಳ ಮಧ್ಯೆ ಅವರು ಹಾಡಿದ ಸ್ವಾಮಿನಾಥ ಮತ್ತು ಜಂಜೂಟಿ (ದೀಕ್ಷಿತರ ಗಜಾಂ) ಕಛೇರಿಯ ರಸಮಯತೆಗೆ ಒತ್ತು ಕೊಟ್ಟವು.

ಸುಸಂಗತ ಹಾರ್ಮೋನಿಯಂ
ಕಳೆದ ಶನಿವಾರ ಅನನ್ಯ ಸಭಾಂಗಣದಲ್ಲಿ ಈ ಬಾರಿಯ ನಾದಜ್ಯೋತಿ ಪುರಸ್ಕೃತ ನುರಿತ ಖಂಜರಿ ವಾದಕ ಸಿ.ಪಿ.ವ್ಯಾಸವಿಠಲ ಅವರ ನೇತೃತ್ವದ ದಶಪ್ರಮಥಿ ಸಂಗೀತ ಕಲಾಶಾಲೆಯ ವಾರ್ಷಿಕೋತ್ಸವದ ನಿಮಿತ್ತ ಎರಡು ದಿನ ಸಂಗೀತ ಕಛೇರಿಗಳು ನಡೆದವು. ಯುವ ಹಾರ್ಮೋನಿಯಂ ವಾದಕ ಸಾಯಿಕೀರ್ತಿ ಅತ್ಯುತ್ತಮ ವಾದನದಿಂದ ಮುದಗೊಳಿಸಿದರು.
 
ಗಣೇಶ್‌ಕುಮಾರ್ (ಪಿಟೀಲು), ಹಿರಿಯ ಮೃದಂಗ ವಿದ್ವಾನ್ ಬಿ.ಕೆ.ಚಂದ್ರಮೌಳಿ ಮತ್ತು ಆನೂರು ದತ್ತಾತ್ರೇಯಶರ್ಮ (ಮೃದಂಗ) ಅವರ ಪರಿಣತ ಪಕ್ಕವಾದ್ಯಗಳೊಂದಿಗೆ ಸಾಯಿಕೀರ್ತಿ ಹಾರ್ಮೋನಿಯಂನಲ್ಲಿ ಕರ್ನಾಟಕ ಸಂಗೀತದ ಬೆಡಗನ್ನು ಅನಾವರಣಗೊಳಿಸಿದರು.
 
ಅವರ ಕೈಬೆರಳುಗಳು ಮತ್ತು ಬೆಲ್ಲೋನ ನಿರ್ವಹಣೆ ಗಮಕಗಳು ಮತ್ತು ಸ್ಫುಟ ಸಾಹಿತ್ಯದಿಂದ ರಂಜಿಸಿತು. ಮೋಹನ ವರ್ಣವನ್ನು ಐದು ಕಾಲಗಳಲ್ಲಿ ನುಡಿಸಿ ತಮ್ಮ ಲಯ ಪ್ರಭುತ್ವ ಮತ್ತು ವಾದ್ಯ ಕುಶಲತೆಯನ್ನು ಪರಿಚಯಿಸಿದರು.

`ಹಂಸಧ್ವನಿ~ (ವಂದೇನಿಶಮಹಂ), `ಗಾನಮೂರ್ತೆ~, `ನಿನ್ನುವಿನಾ~ ರಚನೆಗಳ ನಂತರ `ಮಾಯಾಮಾಳವಗೌಳ~ (ತುಳಸೀದಳ) ಮತ್ತು `ಕಾಮವರ್ಧಿನಿ~ (ಶಿವಶಿವಎನರಾದ) ರಾಗಗಳ ಪ್ರಸರಣೆ ವಿಪುಲ ಸಂವೇದನೆಗಳಿಂದ ಒಡಗೂಡಿತ್ತು.

ಯುವ ಪ್ರತಿಭೆ
ಪ್ರವರ್ಧಮಾನಕ್ಕೆ ಬರುತ್ತಿರುವ ಯುವ ಗಾಯಕ ಆರ್.ರಘುರಾಮ್ ಮಲ್ಲೇಶ್ವರದ ಹಿಮಾಂಶು ಜ್ಯೋತಿ ಕಲಾಪೀಠದ ಸಭಾಂಗಣದಲ್ಲಿ `ಸೌಗಂಧಿಕಾ~ದ ಆಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಅಲ್ಪಾವಧಿಯ ಕಛೇರಿಯನ್ನು ಮಾಡಿ ಭೇಷ್ ಅನಿಸಿಕೊಂಡರು. ಕೇಳಲು ಸುಖಕರವಾದ ಕಂಠವನ್ನು ಹೊಂದಿರುವ ಅವರು ದಾಸರ ಕೃತಿಗಳು ಮತ್ತು ತ್ಯಾಗರಾಜರ `ವಂದನಮು~ (ಶಹನ), `ನಿನ್ನೆನೆರನಮ್ಮಿ~ (ಕಾಮವರ್ಧಿನಿ) ಮುಂತಾದ ರಚನೆಗಳನ್ನು ಗೋವಿಂದಸ್ವಾಮಿ (ಪಿಟೀಲು), ಜಗತಿಪ್ರಿಯ (ಮೃದಂಗ) ಮತ್ತು ಎಂ.ಎ.ಕೃಷ್ಣಮೂರ್ತಿ (ಘಟ) ಅವರ ಉಪಯುಕ್ತ ಸಹಕಾರದೊಂದಿಗೆ ಹಾಡಿದರು. ಕಲಾವಿದ ಗೊಪಾಲಕೃಷ್ಣ ಮುಂದಾಳತ್ವದಲ್ಲಿ ನಡೆದ ಶ್ರೀತ್ಯಾಗರಾಜ ಆರಾಧನೆ ಸಂದರ್ಭದಲ್ಲಿ ಅವರ ಕಛೇರಿ ನಡೆಯಿತು.

ಕೇಳ್ಮೆಯ ಸುಖ

ಹಿರಿಯ ಗಾಯಕಿ ಪಿ. ರಮಾ ಅವರು ಸೇವಾ ಸದನದಲ್ಲಿ ಏರ್ಪಡಿಸಿದ್ದ ಸಂಗೀತ ಸಂಭ್ರಮ ಉತ್ಸವದಲ್ಲಿ ಹಾಡಿದ ದೆಹಲಿ ಆಕಾಶವಾಣಿಯ ಡಾ. ಕೆ. ವಾಗೀಶ್ ಅವರು ಕೇಳ್ಮೆಯ ಸುಖವನ್ನುಂಟುಮಾಡಿದರು. ವೆಂಕಟೇಶ್ ಜೋಸ್ಯರ್ (ಪಿಟೀಲು), ಎ.ಕುಮಾರ್ (ಮೃದಂಗ) ಮತ್ತು ಬಿ.ಎನ್.ಚಂದ್ರಮೌಳಿ (ಖಂಜಿರ) ಅವರ ಪಕ್ಕವಾದ್ಯ ಸಹಿತ ಪುರಂದರದಾಸರ ವರವೇದಪುರಾಣ ರಚನೆಯೊಂದಿಗೆ ತಮ್ಮ ಕಛೇರಿಯನ್ನು ಆರಂಭಿಸಿದರು.

 ಕಲ್ಪನಾಸ್ವರಗಳಿಂದ ಸಜ್ಜುಗೊಂಡು `ವಂದೇ ಮನದಿ ಭಜಿಸು ವಾಗ್ದೇವಿ~ಯು ಮೆರೆದಳು. ರಸಿಕರಂಜನಿ ರಾಗದ ವಿಸ್ತಾರ ಮತ್ತು ರಸಿಕ ರಂಜನಿ ನಿರಂಜನಿ ಕೀರ್ತನೆಯು ಪ್ರಾಸ ಬದ್ಧ ಭಾವಪೂರ್ಣ ಸಾಹಿತ್ಯ ಕಿವಿದುಂಬಿತು.

ಆತ್ಮವಿಶ್ವಾಸದ ಭರತನಾಟ್ಯ
ಎಡಿಎ ರಂಗಮಂದಿರದಲ್ಲಿ ನಡೆದ ಭರತನಾಟ್ಯದಲ್ಲಿ ಯುವ ನರ್ತಕಿ ಭಾಗ್ಯ ಅವರ ಆತ್ಮ ವಿಶ್ವಾಸ ಪೂರ್ಣ ಪ್ರಮಾಣದಲ್ಲಿ ಪ್ರಕಟಗೊಂಡಿತು. ಸಫಲ ನರ್ತಕಿಗೆ ಬೇಕಾದ ಸಕಲ ಅವಶ್ಯಕತೆಗಳನ್ನೂ ಪಡೆದುಕೊಂಡಿರುವ ಅವರು ತಮ್ಮ ಆಕರ್ಷಕ ಹೂನಗೆ ಮತ್ತು ಮುಖಿಜಗಳಿಂದ ಮನ ಸೆಳೆದರು.
 
ಗುರು ಮಮತಾ ಕಾರಂತರ ಶಿಷ್ಯೆಯಾದ ಅವರು ತಮ್ಮ ಲಯ ಪರಿಣತಿಯನ್ನೂ ತೋರಿದರು. ಕೆಲವು ಅಸಮ ಅರೆಮಂಡಳಿಗಳನ್ನು ಹೊರತುಪಡಿಸಿ ನೋಡಿದಾಗ ಅವರ ನೃತ್ಯ ಮತ್ತು ನೃತ್ತಗಳು ಅಭಿನಂದನಾರ್ಹವಾಗಿದ್ದವು. ಪುಷ್ಪಾಂಜಲಿ, ರಾಗಮಾಲಿಕಾ ಜತಿಸ್ವರ ಹಾಗೂ ಭಾಗವತರ ಮೋಹನಕಲ್ಯಾಣಿ ದರುವರ್ಣ (ಮಾತೇ ಮಲಯಾಧ್ವಜ) ಅವರ ಸರಿಯಾದ ಗ್ರಹಿಕೆಗಳನ್ನು ಹೊರಗೆಡಹಿತು.
 
ಶಿವನನ್ನು ಕುರಿತಾದ ಆಡಿ ಕೊಂಡಾರ್ (ಮಾಯಾಮಾಳವಗೌಳ) ಸಾರ್ಥಕ ಅಭಿನಯದಿಂದ ಜೀವಂತವಾಯಿತು. ಮಮತಾಕಾರಂತ (ನಟುವಾಂಗ), ಶ್ರೀವತ್ಸ (ಗಾಯನ), ನಟರಾಜಮೂರ್ತಿ (ಪಿಟೀಲು), ಜಯರಾಮ್(ಕೊಳಲು) ಮತ್ತು ನಾರಾಯಣಸ್ವಾಮಿ (ಮೃದಂಗ) ನೃತ್ಯದ ಶೋಭೆ ಹೆಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT