ಬೆಳಗಾವಿ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಅವರ ಭವಿಷ್ಯಕ್ಕೆ ಸೂಕ್ತ ಅಡಿಪಾಯ ಹಾಕಿದಂತಾಗುತ್ತದೆ. ಕರ್ತವ್ಯ ಪ್ರಜ್ಞೆ, ಸಾಧಿಸುವ ಛಲವಿರುವ ವಿದ್ಯಾರ್ಥಿ ಅದರ ಸದುಪಯೋಗ ಪಡಿಸಿಕೊಂಡು ಮುಂದೆ ಬರುತ್ತಾನೆ” ಎಂದು ನಿವೃತ್ತ ಪ್ರಾಚಾರ್ಯ ಎ.ಎಸ್. ದೇಸಾಯಿ ಹೇಳಿದರು.
ನಗರದ ಪ್ರತಿಷ್ಠಿತ ಜೆಜಿಐ ಸಂಸ್ಥೆಯ ಮಚ್ಚೆ ಜೈನ ಮಹಾವಿದ್ಯಾಲಯದಲ್ಲಿ ಏರ್ಪಡಿಸಿರುವ ಎಸ್ಎಸ್ಎಲ್ಸಿ ಪರೀಕ್ಷಾ ಪೂರ್ವ ಸಿದ್ಧತೆ ಮೂರು ದಿನಗಳ ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಭಾವಂತರನ್ನು ಇತರೇ ವಿದ್ಯಾರ್ಥಿಗಳು ಅನುಸರಿಸಬೇಕು ಎಂದು ಸಲಹೆ ನೀಡಿದ ಅವರು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತಿಳಿವಳಿಕೆಗೆ ಸಾಕಷ್ಟು ಮಾರ್ಗಗಳಿವೆ. ಸೂಕ್ತ ಮಾರ್ಗದರ್ಶನ ಪಡೆಯುವ ಮೂಲಕ ಅವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಉತ್ತಮ ಜೀವನ ನಿರ್ವಹಣೆಯ ಮಾರ್ಗೋಪಾಯಗಳನ್ನು ವಿದ್ಯಾರ್ಥಿ ದಿಸೆಯಲ್ಲೇ ಕಂಡುಕೊಳ್ಳಬೇಕು. ಮುಖ್ಯವಾಗಿ ನಿರಂತರ ಅಧ್ಯಯನ ಹಾಗೂ ಸಮಯ ಪ್ರಜ್ಞೆ ರೂಢಿ ಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಸಮಾರಂಭದಲ್ಲಿ ಜೆಜಿಐ ಸಂಸ್ಥೆಯ ನಿರ್ದೇಶಕರಾದ ಆರ್.ಜಿ. ಧಾರವಾಡಕರ, ಎಂಜಿನಿಯರಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಡಿ.ಎಚ್. ರಾವ್, ಜೆಜಿಐ ಸಂಸ್ಥೆಯ ಸದಸ್ಯೆ ಶ್ರದ್ಧಾ ಕೆ. ಜೈನ್, ಮಹಾವಿದ್ಯಾಲಯದ ಪ್ರಾಚಾರ್ಯ ಸಂದೀಪ ನಾಯರ್, ಜೈನ ಪದವಿ ಪೂರ್ವ ವಿಭಾಗದ ಮುಖ್ಯಸ್ಥ ಎ.ಕೆ. ಜೋಶಿ ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ಕವಿತಾ ಪಿ. ಶಿವಪೂಜಿಮಠ ಹಾಗೂ ಸುನಿತಾ ಪಾಟೀಲ ನಿರೂಪಿಸಿದರು. ಎಂ.ಎಲ್. ಪಾಟೀಲ ವಂದಿಸಿದರು.