ಶ್ರೀನಿವಾಸಪುರ: ಹಾಲು ಉತ್ಪಾದಕರು ಒಕ್ಕೂಟ ವ್ಯಾಪ್ತಿಯ ಡೇರಿಗಳಿಗೆ ಹಾಕುವ ಮೂಲಕ ಒಕ್ಕೂಟ ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಉತ್ತಮ ಗುಣಮಟ್ಟದ ಹಾಲನ್ನು ಉತ್ಪಾದಿಸಬೇಕು ಎಂದು ಕೋಲಾರ ಹಾಲು ಒಕ್ಕೂಟದ ನಿರ್ದೇಶಕ ಡಾ. ಎ.ವಿ. ಪ್ರಸನ್ನ ಸಲಹೆ ಮಾಡಿದರು.
ಪಟ್ಟಣದ ಹೊರವಲಯದಲ್ಲಿನ ಪುಂಗನೂರು ಕ್ರಾಸ್ ಸಮೀಪ ಈಚೆಗೆ ಏರ್ಪಡಿಸಲಾಗಿದ್ದ 2012- 13ನೇ ಸಾಲಿನ ಸಮಗ್ರ ವ್ಯಾಪಾರ ಕ್ರಿಯಾ ಯೋಜನೆ ಮತ್ತು ಬೆಳ್ಳಿಹಬ್ಬ ಆಚರಣೆ ಕುರಿತ ಪ್ರಾದೇಶಿಕ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪರೀಕ್ಷೆಗಳಿಂದ ಲೀಟರಿಗೆ ಸರಾಸರಿ 30 ಮಿಲಿ ಲೀಟರ್ ನೀರು ಇರುವುದು ಕಂಡು ಬಂದಿದೆ. ಹಾಲು ಉತ್ಪಾದಕರಿಗೆ ನಷ್ಟ ವಾಗದಂತೆ ಹಾಲಿನ ಬೆಲೆ ಏರಿಸಲು ಸರ್ಕಾರದೊಂದಿಗೆ ಮಾತುಕತೆ ನಡೆದಿದೆ. ಉತ್ಪಾದನೆ ಅಧಿಕವಾಗಿರುವುದರಿಂದ ಬೆಲೆ ಕುಸಿದಿದೆ. ಆದರೆ ಉತ್ಪಾದನೆಯ ವೆಚ್ಚ ಜಾಸ್ತಿಯಾಗುತ್ತಿದೆ ಎಂದರು.
ಹಾಲು ಒಕ್ಕೂಟ ತನ್ನ ಹಾಲು ಉತ್ಪಾದಕರಿಗೆ ವಿವಿಧ ಯೋಜನೆಗಳಡಿ ರೂ. 15 ಕೋಟಿ ನೀಡಿದೆ. ಕೋಲಾರ ದಲ್ಲಿ ಪಶು ಆಹಾರ ಕೇಂದ್ರ ತೆರೆಯಲು ಯೋಚಿಸಲಾಗುತ್ತಿದೆ. ಯೋಜನೆಗಳ ಅನುಕೂಲವನ್ನು ಅಧ್ಯಕ್ಷ, ಕಾರ್ಯದರ್ಶಿ ಗಳು ರೈತರಿಗೆ ತಲುಪಿಸುವ ಜವಾಬ್ದಾರಿ ಹೊರಬೇಕು ಎಂದು ಹೇಳಿದರು.
ನಿರ್ದೇಶಕ ಸಿ.ಮುನಿವೆಂಕಟಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, 4 ಸಾವಿರ ವಿದ್ಯಾರ್ಥಿಗಳಿಗೆ ತಲಾ 1200 ರೂಪಾಯಿಗಳಂತೆ ವಿದ್ಯಾರ್ಥಿ ವೇತನವನ್ನು ನೀಡಲಾಗು ತ್ತಿದೆ. ಈ ವರ್ಷ ಬೇರೆ ತಾಲ್ಲೂಕು ಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಂದಿಲ್ಲ. ಹಾಗಾಗಿ ಶ್ರೀನಿವಾಸಪುರ ತಾಲ್ಲೂಕಿನ ಹೆಚ್ಚು ವಿದ್ಯಾರ್ಥಿಗಳಿಗೆ ಹಂಚಲಾಗಿದೆ. ಮುಂದೆ ಹಸು ವಿಮೆ ಕಡ್ಡಾಯವಾಗಿ ಮಾಡಿಸಬೇಕು. ಏನಾ ದರೂ ವ್ಯತ್ಯಾಸವಾದರೆ ದತ್ತಿ ನಿಧಿಯಿಂದ ಅದಕ್ಕೆ ರೂ. 37 ಸಾವಿರ ಪರಿಹಾರ ಸಿಗಲಿದೆ ಎಂದು ಹೇಳಿದರು.
ನಿರ್ದೇಶಕ ಡಾ. ಜಿ.ಟಿ ಗೋಪಾಲ್ ಮಾತನಾಡಿ, ಒಕ್ಕೂಟದ ಯೋಜನೆಗಳು ಉತ್ಪಾದಕರಿಗೆ ತಲುಪಬೇಕಿದೆ. ಉತ್ಪಾ ದಕರು ಬಳಸಿಕೊಂಡಲ್ಲಿ ಅಭಿವದ್ಧಿ ಸಾಧ್ಯ ವಾಗುತ್ತದೆ. ರೈತ ಮಕ್ಕಳು ಕ್ಷೀರೋತ್ಪಾ ದನೆಗೆ ಸಂಬಂಧಿಸಿದ ಕೋರ್ಸ್ಗಳನ್ನು ತೆಗೆದುಕೊಂಡು ಅಭ್ಯಾಸಮಾಡುವುದು ಒಳ್ಳೆಯದು ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಒಕ್ಕೂಟದ ಯೋಜನೆಗಳಾದ ಜನಶ್ರೀ, ದತ್ತಿ, ಗುಂಪು ವಿಮೆಯ ಚೆಕ್ಗಳನ್ನು ಫಲಾನುಭವಿ ಗಳಿಗೆ ವಿತರಿಸಲಾಯಿತು.ಒಕ್ಕೂಟದ ವ್ಯವಸ್ಥಾಪಕ ಕೆ.ವಿ. ನಾರಾಯಣಸ್ವಾಮಿ, ಉಪ ವ್ಯವಸ್ಥಾಪಕ ರಮೇಶ್, ಡಾ. ಪ್ರಸಾದ್, ಅಧಿಕಾರಿ ನರಸಿಂಹಯ್ಯ, ಶಿಬಿರದ ನಿರ್ದೇಶಕ ಡಾ. ರಾಜ್ಕುಮಾರ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.