ಬೆಳಗಾವಿ: ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದತಿ ಹಾಗೂ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ₨ 10 ಸಾವಿರ ವೇತನ ನೀಡಬೇಕು ಎಂದು ಆಗ್ರಹಿಸಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಡಾ. ಅಂಬೇಡ್ಕರ್ ಉದ್ಯಾನದಿಂದ ಮೆರವಣಿಗೆಯಲ್ಲಿ ಆಗಮಿಸಿದ ಕಾರ್ಮಿಕರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬೆಲೆ ಏರಿಕೆ ನಿಯಂತ್ರಿಸಬೇಕು. ಉದ್ಯೋಗ ಸೃಷ್ಟಿಸಲು ಹಾಗೂ ರಕ್ಷಿಸಲು ಪ್ಯಾಕೇಜ್ ಘೋಷಿಸಬೇಕು. ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು. ಎಲ್ಲ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಬೇಕು. ಲಾಭದಾಯಕ ಸಾರ್ವಜನಿಕ ಕ್ಷೇತ್ರದ ಕೈಗಾರಿಕೆಗಳ ಷೇರು ಮಾರಾಟ ತಡೆಯಬೇಕು ಹಾಗೂ ಖಾಸಗೀಕರಣ ಮಾಡಬಾರದು ಎಂದು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ಅವರಿಗೆ ಕಳುಹಿಸಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.
ಶಾಸನಬದ್ಧ ಕನಿಷ್ಠ ಕೂಲಿಯನ್ನು ನಿಗದಿಪಡಿಸಲು ಕನಿಷ್ಠ ಕೂಲಿ ಕಾಯ್ದೆಗೆ ತಿದ್ದುಪಡಿ ತರಬೇಕು. ಎಲ್ಲರಿಗೂ ನಿವೃತ್ತಿ ವೇತನ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಜೆ.ಎಂ.ಜೈನೆಖಾನ, ಸಿ.ಎ.ಖರಾಡೆ, ಗಿರೀಶ ಶೆಟ್ಟಿ, ವಿ.ಪಿ.ಕುಲಕರ್ಣಿ, ಬಿ.ಎನ್.ಪಾಟೀಲ, ದೊಡ್ಡವ್ವ ಪೂಜಾರಿ, ಪ್ರೇಮಾ ಕಿಲ್ಲೇದಾರ, ಗೋದಾವರಿ ರಾಜಾಪುರೆ, ಎಲ್.ಎಸ್.ನಾಯಕ, ಟಿ.ಎ.ಬಭಗೌಡ, ನಾಗಪ್ಪ ಸಂಗೊಳ್ಳಿ ಮತ್ತಿತರರು ನೇತೃತ್ವ ವಹಿಸಿದ್ದರು.