ಗುಲ್ಬರ್ಗ: ಕೇಂದ್ರ ಸರ್ಕಾರದ ವತಿಯಿಂದ ಗುಲ್ಬರ್ಗದಲ್ಲಿ ಪ್ರವಾಸೋದ್ಯಮ ನಿರ್ವಹಣಾ ಸಂಸ್ಥೆಯನ್ನು ಆರಂಭಿಸಲಾಗುವುದು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಸುಬೋಧಕಾಂತ ಸಹಾಯ್ ಶುಕ್ರವಾರ ಘೋಷಿಸಿದರು.
ನಗರದ ಹೊರವಲಯದಲ್ಲಿರುವ ಉಪ್ಪಿನ ತೋಟದಲ್ಲಿ ‘ಗುಲ್ಬರ್ಗ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಭಾಗದ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪ್ರವಾಸೋದ್ಯಮ ನಿರ್ವಹಣಾ ಸಂಸ್ಥೆ ಸ್ಥಾಪನೆ ಸಹಕಾರಿಯಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
“ಬೇರೆ ಕಡೆಗೆ ಹೋಲಿಸಿದರೆ ಪ್ರವಾಸಿಗರ ಸಂಖ್ಯೆ ಕರ್ನಾಟಕದತ್ತ ಹರಿದು ಬರುತ್ತಿರುವುದು ಕಡಿಮೆ. ಹಾಗಾಗಿ ಪ್ರವಾಸೋದ್ಯಮ ನಿರ್ವಹಣಾ ಸಂಸ್ಥೆಯನ್ನು ಆರಂಭಿಸಿದರೆ, ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡಲು ಸಾಧ್ಯವಿದೆ” ಎಂದರು.
ಗುಲ್ಬರ್ಗದ ಐತಿಹಾಸಿಕ ಕೋಟೆಯಲ್ಲಿ ಧ್ವನಿ ಬೆಳಕು ಕಾರ್ಯಕ್ರಮವನ್ನು ಶೀಘ್ರವೇ ಆರಂಭಿಸಲು ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದು ಸಹಾಯ್ ಪ್ರಕಟಿಸಿದರು.
ಬೀದರ್, ಗುಲ್ಬರ್ಗ ಹಾಗೂ ವಿಜಾಪುರ ಜಿಲ್ಲೆಗಳನ್ನು ಒಳಗೊಂಡ ಈ ಭಾಗವನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡುವುದಾಗಿ ಭರವಸೆ ನೀಡಿದ ಅವರು, ಐತಿಹಾಸಿಕವಾಗಿ ಸಂಪದ್ಭರಿತವಾದ ಈ 3 ಜಿಲ್ಲೆಗಳ ಇಡೀ ಭಾಗಕ್ಕೆ ವಿಶೇಷ ಯೋಜನೆ ರೂಪಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಪ್ರವಾಸೋದ್ಯಮ ನಿರ್ವಹಣಾ ಸಂಸ್ಥೆ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಐದು ಎಕರೆ ಜಮೀನು ನೀಡುವುದಾಗಿ ಪ್ರಕಟಿಸಿದರು.