ಬೆಂಗಳೂರು: `ಸಮಾಜಕ್ಕೆ ಗೃಹರಕ್ಷಕರು ನೀಡುತ್ತಿರುವ ಸೇವೆ ಅಪಾರವಾಗಿದ್ದು, ಹೆಚ್ಚು ಹೆಚ್ಚು ಜನರು ಗೃಹರಕ್ಷಕ ದಳಕ್ಕೆ ಸೇರಿ ಸಮಾಜ ಸೇವೆಗೆ ಮುಂದಾಗಬೇಕು' ಎಂದು ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಎಚ್.ಔರಾದಕರ್ ಕರೆ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಗೃಹರಕ್ಷಕ ದಳವು ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗೃಹರಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
`ಸಮವಸ್ತ್ರ ತೊಡುವ ಹೆಮ್ಮೆ, ತರಬೇತಿಯ ಪ್ರಯೋಜನ ಹಾಗೂ ಸಮಾಜ ಸೇವೆಯ ಸಾರ್ಥಕತೆ ಗೃಹರಕ್ಷಕರಿಗೆ ದೊರೆಯುತ್ತದೆ. ಹೆಚ್ಚು ಜನರು ಗೃಹರಕ್ಷಕ ದಳ ಸೇರಲು ಮುಂದಾಗಬೇಕು' ಎಂದರು.
ಬೆಂಗಳೂರು ವಿ.ವಿಯ ಹಂಗಾಮಿ ಕುಲಪತಿ ಡಾ.ಎನ್.ರಂಗಸ್ವಾಮಿ ಮಾತನಾಡಿ, `ಯಾವುದೇ ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಗೃಹರಕ್ಷಕರು ಅಲ್ಲಿ ಹಾಜರಾಗಿ ತಮ್ಮ ಸೇವೆ ಸಲ್ಲಿಸುತ್ತಾರೆ. ಗೃಹರಕ್ಷಕರ ಪಾತ್ರ ಬಹು ಮುಖ್ಯವಾದುದು ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಗೃಹರಕ್ಷಕ ದಳದ ಜಿಲ್ಲಾ ಕಮಾಂಡರ್ ಬಿ.ಅಮರನಾಥ್, ಖಜಾನೆ ಇಲಾಖೆಯ ಗ್ರಾಮಾ ಂತರ ಜಿಲ್ಲಾ ಉಪ ನಿರ್ದೇಶಕಿ ವಿ.ಭಾಗ್ಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.