`ಬದ್ಧತೆ, ಉದ್ದೇಶ ಪ್ರಶ್ನಾರ್ಹ~ ಶೀರ್ಷಿಕೆಯ (ವಾ.ವಾ. ಜ.20) ಪತ್ರಕ್ಕೆ ಪ್ರತಿಕ್ರಿಯೆ: ವಿವೇಕಾನಂದರ ಬಗ್ಗೆ ದಿನೇಶ್ ಅಮಿನ್ ಮಟ್ಟು ಬರೆದ ಲೇಖನ ನಾವು ಕಟ್ಟಿಕೊಂಡ ವಿವೇಕಾನಂದರ ಚಿತ್ರವನ್ನೇ ಬದಲಿಸಿತು.
ಕಾರಣ ಅವರನ್ನು ದೈವತ್ವಕ್ಕೇರಿಸಿ ಪೂಜಿಸುವುದರಲ್ಲಿ ಯಾವ ಲಾಭವೂ ಇಲ್ಲ. ಬದಲಾಗಿ ಅವರು ನಮ್ಮ ಗೆಳೆಯರಾಗಿ ನಮ್ಮಳಗೆ ಇಳಿಯಬೇಕು. ಅವರು ಕೇವಲ ಮನುಷ್ಯರಾಗಿದ್ದರು. ಮನುಷ್ಯರ ಜತೆ ಗೆಳೆತನ ಬೆಳೆಸಲು ಸಾಧ್ಯ. ಲೇಖನ ವಿವೇಕಾನಂದರನ್ನು ಮತ್ತಷ್ಟು ಆಪ್ತರನ್ನಾಗಿಸಿತು.
ದಿನೇಶ್ ಅವರ ಲೇಖನದಿಂದ ವಿವೇಕಾನಂದರಿಗೆ ನನ್ನಂತಹ ಸಾವಿರಾರು ಹೊಸ ಸ್ನೇಹಿತರು ಸಿಕ್ಕರು. ಲೇಖನವನ್ನು ವಿರೋಧಿಸುವವರು ವಿವೇಕಾನಂದರನ್ನು ಶಿಲ್ಪದಲ್ಲಿ, ಪೋಸ್ಟರಿನಲ್ಲಿ, ಚಿತ್ರಗಳಲ್ಲಿ ಜಡವಾಗಿರಿಸಲು ಬಯಸುತ್ತಾರೆ. ಲೇಖನ ಅವರನ್ನು ಶಿಲ್ಪದಿಂದ, ಚಿತ್ರದಿಂದ ಬಿಡಿಸಿ ಓದುಗರ ಜತೆ ಬೆರೆಯಲು ಬಿಟ್ಟಂತಾಗಿದೆ.
ಲೇಖನ ಓದಿ ವಿವೇಕಾನಂದರ ಬಗ್ಗೆ ಗೌರವ ಹೆಚ್ಚಿದೆಯೇ ವಿನಾ ಕಡಿಮೆ ಆಗಿಲ್ಲ. ವಿ.ರಘು ಅವರು ಲೇಖನದ ಬದ್ಧತೆ ಮತ್ತು ಉದ್ದೇಶವನ್ನು ಪ್ರಶ್ನಿಸಿದ್ದಾರೆ. ಬದಲಾಗಿ ವಿವೇಕಾನಂದರು ಬಹುಪಾಲು ಓದುಗರ ಗೆಳೆಯರಾದುದ್ದನ್ನು ಮರೆತಿದ್ದಾರೆ. ವಿವೇಕಾನಂದರನ್ನು ಜಡಗೊಳಿಸುವಂತಹ ವಿರೋಧ ಆರೋಗ್ಯಕರವಲ್ಲ.