ಕವಿತಾಳ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ರೈತರಿಗೆ ಗುರುವಾರ ರಸ ಗೊಬ್ಬರ ವಿತರಿಸಲಾಯಿತು.
ರಸ ಗೊಬ್ಬರ ಕೊರತೆಯಿಂದ ಕಂಗೆಟ್ಟ ರೈತರು, ಗೊಬ್ಬರ ವಿತರಣೆ ಮಾಹಿತಿ ತಿಳಿಯುತ್ತಲೇ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಕೆಲ ಕಾಲ ನೂಕುನುಗ್ಗಲು ಉಂಟಾಯಿತು.
ಪೊಲೀಸ್ ಬಂದೋಬಸ್ತ್ನಲ್ಲಿ ಗೊಬ್ಬರ ವಿತರಣೆ ನಡೆಯಿತು. ಕವಿತಾಳ ಸೇರಿದಂತೆ ಹಣಗಿ, ಹುಸೇನಪುರ, ಸೈದಾಪುರ ಮತ್ತು ಕ್ಯಾಂಪ್ಗಳು ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವ್ಯಾಪ್ತಿಗೊಳಪಟ್ಟಿದ್ದು, ರೈತರ ಬೇಡಿಕೆಯಷ್ಟು ಗೊಬ್ಬರ ಲಭ್ಯವಾಗುತ್ತಿಲ್ಲ.
20 ಕ್ವಿಂಟಲ್ ಯೂರಿಯಾ, 25 ಕ್ವಿಂಟಲ್ ಡಿಎಪಿ ಮತ್ತು 10 ಕ್ವಿಂಟಲ್ 20-20 ಸರಬರಾಜಾಗಿದ್ದು, ಇನ್ನೂ 100 ಕ್ವಿಂಟಲ್ ಯೂರಿಯಾ, 50 ಕ್ವಿಂಟಲ್ ಡಿಎಪಿ ಮತ್ತು 20-20 ರಸ ಗೊಬ್ಬರ ಬೇಡಿಕೆ ಇದೆ. ಸಂಘದ ಅಧ್ಯಕ್ಷ ವೀರಾರಡ್ಡೆಪ್ಪ ಭಾವಿಕಟ್ಟಿ ತಿಳಿಸಿದ್ದಾರೆ.
ವಿವಿಧ ಬೆಳೆಗಳು ಬೆಳವಣಿಗೆ ಹಂತದಲ್ಲಿದ್ದು, ಈ ಸಮಯಕ್ಕೆ ರಸ ಗೊಬ್ಬರ ಅಗತ್ಯವಿದೆ ಎಂದು ರೈತರು ಹೇಳುತ್ತಾರೆ. ಆದರೆ, ಗೊಬ್ಬರದ ಕೊರತೆಯಿಲ್ಲ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳುತ್ತಿರುವಾಗಲೇ ಸಬ್ಸಿಡಿ ದರದಲ್ಲಿ ಗೊಬ್ಬರ ಪಡೆಯಲು ಹರಸಾಹಸ ಪಡುವಂತಾಗಿದೆ.