ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋದಲಿಯಲ್ಲಿ ಮೂಡಿದ ಬದುಕು!

ದಾವಣಗೆರೆಯಲ್ಲಿ ಕ್ರಿಸ್‌ಮಸ್‌ ಸಂಭ್ರಮ
Last Updated 25 ಡಿಸೆಂಬರ್ 2013, 5:31 IST
ಅಕ್ಷರ ಗಾತ್ರ

ದಾವಣಗೆರೆ: ಸರಳತೆ, ಮೌಲ್ಯ, ಪ್ರಾರ್ಥನೆ, ಸಹೋದರತ್ವ, ಪರೋಪಕಾರದ ಮಹತ್ವ ಸಾರುವ ಕ್ರಿಸ್‌ಮಸ್‌ ಹಬ್ಬ ಆಚರಣೆಗೆ ದಾವಣಗೆರೆ ಜಿಲ್ಲೆ ಸಜ್ಜಾಗಿದೆ. ಚರ್ಚ್‌ಗಳು ವಿದ್ಯುತ್‌ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿವೆ. ನಕ್ಷತ್ರ ಬುಟ್ಟಿಗಳು ಮೆರುಗು ನೀಡುತ್ತಿವೆ. ಚರ್ಚ್‌ ಆವರಣದಲ್ಲಿ ‘ಗೋದಲಿ’ ಆಕರ್ಷಿಸುತ್ತಿದೆ.

ಪ್ರಾರ್ಥನೆಯಲ್ಲಿ ಭೇದವುಂಟೇ? ಸಂಕಟ ಬಂದಾಗ ಪ್ರಾರ್ಥನೆ ಸಾಮಾನ್ಯ! ಇಂಥ ಪ್ರಾರ್ಥನೆ ಹಾಗೂ ತನ್ನನ್ನು ತಾನೇ ಸುಟ್ಟುಕೊಂಡರೂ ಇತರರಿಗೆ `ಬೆಳಕು’ ನೀಡುವ ಮೇಣದಬತ್ತಿಯಲ್ಲಿ ಅದೆಂಥ ಪ್ರೀತಿಯ ಸಂದೇಶ? ಎಲ್ಲ ಅಹಂ ಬದಿಗಿರಿಸಿ, ಪರೋಪಕಾರಿಯಾಗಿ ಬಾಳಬೇಕು ಎಂಬ ಅರಿವನ್ನು ನೀಡುವ ಮೇಣದಬತ್ತಿಯನ್ನು ಬೆಳಗಿ, ಪ್ರಾರ್ಥಿಸುವುದರಲ್ಲಿ ಭಕ್ತಿಯ ಪ್ರತೀಕವಿದೆ. ಇಂಥ ಹತ್ತಾರು ಸಂದೇಶ ಸಾರುವ, ಎಲ್ಲ ವರ್ಗದವರಿಗೂ ಇಷ್ಟವಾಗುವ ಹಬ್ಬವೇ ‘ಕ್ರಿಸ್‌ಮಸ್’.

`ಮಧ್ಯ ಕರ್ನಾಟಕ’ ದಾವಣಗೆರೆಯಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಕ್ರೈಸ್ತ ಬಾಂಧವರು ಸಂಭ್ರಮ, ಸಡಗರ ಹಾಗೂ ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ. ಹಬ್ಬದ ಆಚರಣೆಯ ವಿಧಿವಿಧಾನಗಳಲ್ಲಿ ಪ್ರದೇಶದಿಂದ- ಪ್ರದೇಶಕ್ಕೆ ಅಷ್ಟೇನು ಭಿನ್ನತೆ ಕಂಡು ಬರುವುದಿಲ್ಲ. ಆದರೆ, ಭಕ್ತಿಯ ಸಮರ್ಪಣೆಗಾಗಿ ಇಲ್ಲಿಯೂ ಸಾಮೂಹಿಕ ವಿಶೇಷ ಪ್ರಾರ್ಥನೆ ನಡೆಯುತ್ತದೆ. ದಾವಣಗೆರೆಯ ಪಿ.ಜೆ. ಬಡಾವಣೆಯಲ್ಲಿರುವ ಸಂತ ಥಾಮಸರ ದೇವಾಲಯ, ಆಕರ್ಷಕ ವಿದ್ಯುತ್ ಅಲಂಕಾರಗಳಿಂದ ಕಂಗೊಳಿಸುತ್ತಿದೆ.

ಎಲ್ಲೆಲ್ಲಿ ಯಾವ್ಯಾವ ಚರ್ಚ್?
‘ರೋಮನ್ ಕ್ಯಾಥೋಲಿಕ್’ ಹಾಗೂ ‘ಪ್ರೊಟೆಸ್ಟೆಂಟ್‌’ಗಳು ಸೇರಿ ಜಿಲ್ಲೆಯಲ್ಲಿ ಆರು ಸಾವಿರಕ್ಕೂ ಹೆಚ್ಚು ಕ್ರೈಸ್ತ ಬಾಂಧವರು ಇದ್ದಾರೆ ಎಂಬುದು ಅಂದಾಜು. ದಾವಣಗೆರೆ ತಾಲ್ಲೂಕಿನಲ್ಲಿಯೇ ಒಂದೂವರೆ ಸಾವಿರಕ್ಕೂ ಹೆಚ್ಚು ‘ರೋಮನ್ ಕ್ಯಾಥೋಲಿಕ್’ ಪಂಗಡದವರು ಇದ್ದಾರೆ. ‘ರೋಮನ್ ಕ್ಯಾಥೋಲಿಕ್’ ಪಂಗಡಕ್ಕೆ ಸೇರಿದವರು ಸಂಪ್ರದಾಯಗಳನ್ನು ಪಾಲಿಸುತ್ತಾರೆ. ಪೋಪ್ ಧರ್ಮ ಗುರುವನ್ನು ನಂಬುತ್ತಾರೆ. ಸಾಂಪ್ರದಾಯಿಕ ಆಚರಣೆ ಮುಂದುವರಿಸಿಕೊಂಡು ಬಂದಿದ್ದಾರೆ. ಸಂತ ಜೋಸೆಫ್, ಸಂತ ಥಾಮಸ್, ಹರಿಹರದ ಆರೋಗ್ಯ ಮಾತೆ, ಹೊನ್ನಾಳಿಯಲ್ಲಿ ಕ್ರೈಸ್ಟ್ ದ ರಿಡೀಮರ್ ಚರ್ಚ್, ಚನ್ನಗಿರಿಯಲ್ಲಿ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್, ಹರಪನಹಳ್ಳಿಯಲ್ಲಿ ನಿರ್ಮಲ ಮಾತೆ, ಜಗಳೂರಿನಲ್ಲಿ ಹೋಲಿ ಸ್ಪಿರಿಟ್ ಚರ್ಚ್ ಇದೆ. ಇದಲ್ಲದೇ, ದಾವಣಗೆರೆ ನಗರದಲ್ಲಿ ಫುಲ್ ಗಾಸ್ಪಲ್ ಚರ್ಚ್ ಇದೆ. ಜಯನಗರದಲ್ಲೊಂದು ಚರ್ಚ್ ಇದೆ. ನಗರದಲ್ಲಿರುವ ಸಂತಥಾಮಸರ ಚರ್ಚ್‌ನ ಈಗಿರುವ ಕಟ್ಟಡ 2003ರಲ್ಲಿ ನಿರ್ಮಾಣವಾಗಿದೆ. 75 ವರ್ಷಗಳಿಂಲೂ ಇಲ್ಲಿ, ಗುರುಗಳು ವಾಸ ಮಾಡಲು ಶುರು ಮಾಡಿದರು ಎನ್ನುತ್ತಾರೆ ಹಿರಿಯರು.

ಆಚರಣೆ ಹೇಗೆ?
ಹಬ್ಬವನ್ನು ಬಾಹ್ಯ ಹಾಗೂ ಧಾರ್ಮಿಕ ರೀತಿಯಲ್ಲಿ ಆಚರಿಸಲಾಗುತ್ತದೆ. ಬಾಹ್ಯ ಆಚರಣೆ ಎಂದರೆ, ಮನೆಗಳಲ್ಲಿ ಕ್ರೈಸ್ತಭಾಂಧವರು ಬಗೆ ಬಗೆಯ ಕೇಕ್‌ಗಳು, ತಿಂಡಿತಿನಿಸುಗಳನ್ನು ಸಿದ್ಧಪಡಿಸುತ್ತಾರೆ. ಹೊಸ ಬಟ್ಟೆ ತೊಟ್ಟು, ಪೂಜೆ ಸಲ್ಲಿಸುವ ಮೂಲಕ ಪಕ್ಕದ ಮನೆಯವರು, ನೆಂಟರಿಷ್ಟರು, ಸ್ನೇಹಿತರಿಗೆ ಕೇಕ್ ಹಂಚಿ ಸಂಭ್ರಮಿಸುತ್ತಾರೆ.

ಚರ್ಚ್‌ನಿಂದ ನೂರಕ್ಕೂ ಹೆಚ್ಚು ಯುವಕರ ತಂಡ ಮನೆ ಮನೆಗಳಿಗೆ ತೆರಳಿ, ಶುಭಾಶಯ ಗೀತೆ ಹಾಡುವ ಮೂಲಕ ಹಬ್ಬದ ಶುಭಾಶಯ ಕೋರುವ ಕಾರ್ಯಕ್ರಮ ನಡೆಯುತ್ತದೆ. ಬಡವರಿಗೆ ಸೀರೆ ಹಂಚಲಾಗುತ್ತದೆ. ಹಬ್ಬದ ದಿನದಂದು, ತಮ್ಮಂತೆಯೇ ಅವರೂ ಹಬ್ಬದ ಊಟ ಮಾಡಲಿ ಎಂದು ಉಳ್ಳವರು ಬಡವರಿಗೆ ಅಕ್ಕಿ, ಬೇಳೆ, ಸಕ್ಕರೆ ವಿತರಿಸುತ್ತಾರೆ. ಕೇಕ್ ನೀಡಿ ಸಿಹಿ, -ಸಂಭ್ರಮ ಹಂಚಿಕೊಳ್ಳುತ್ತಾರೆ. ಅಧ್ಯಾತ್ಮಿಕ ಆಚರಣೆ- ಪಾಪ ನಿವೇದನೆ (ಕನ್ಫೆಷನ್) ಮಾಡಿಕೊಳ್ಳುವುದಕ್ಕಾಗಿ ಚರ್ಚ್‌ನಲ್ಲಿ ಹಬ್ಬಕ್ಕೆ ಮುನ್ನ ಒಂದು ದಿನ ವಿಶೇಷವಾಗಿ ಅವಕಾಶ ಕಲ್ಪಿಸಲಾಗುತ್ತದೆ. ಡಿ.24ರಂದು ಮಧ್ಯರಾತ್ರಿ ಚರ್ಚ್‌ನಲ್ಲಿ ನಡುರಾತ್ರಿ ದೇವರಿಗೆ (ಏಸುವಿಗೆ) ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದೇ ಸಂದರ್ಭ ಕೇಕ್ ವಿತರಣೆಯೂ ನಡೆಯುತ್ತದೆ. ಡಿ.25ರಂದು ಬೆಳಿಗ್ಗೆ ವಿಶೇಷ ಪೂಜೆ- ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ. ಈ ವೇಳೆ, ಕ್ರೈಸ್ತರು ಮಾತ್ರವಲ್ಲದೇ ಇತರ ಧರ್ಮದವರೂ ಸಹ ಪಾಲ್ಗೊಳ್ಳುವುದು ವಿಶೇಷ.

ಕ್ರಿಸ್ಮಸ್ ಆಚರಣೆಯ ಹಿನ್ನೆಲೆ
ದೇವರು, ವಿಶ್ವ ನಂತರ ಮನುಷ್ಯನನ್ನು ಸೃಷ್ಟಿಸಿದ. ಮನುಷ್ಯರು, ದೇವರು ಆಶಿಸಿದಂತೆ ಜೀವನ ನಡೆಸಲಿಲ್ಲ. ದೇವರ ವಿರುದ್ಧವಾಗಿ ಪಾಪ ಮಾಡಿದರು. ತಮಗೆ ತೋಚಿದಂತೆ ಜೀವನ ಮಾಡಲು ಶುರುವಿಟ್ಟರು. ದೇವರ ಪ್ರೀತಿ, ಆಜ್ಞೆ ಧಿಕ್ಕರಿಸಿದರು. ಹೀಗಾಗಿ, ಸೃಷ್ಟಿ ಶಾಪಗ್ರಸ್ಥ; ಜೀವನ ಕಷ್ಟವೆನಿಸಿತು. ಪಾಪವಿಲ್ಲದೇ ಮನುಷ್ಯ ಬಾಳುವುದು ಕಷ್ಟ ಎಂಬ ಮಟ್ಟಕ್ಕೆ ಪ್ರಪಂಚ ಬಂದಿತು. ಸ್ವಾರ್ಥ, ಅಹಂಕಾರ, ದಬ್ಬಾಳಿಕೆ ಬೆಳೆಯಿತು. ಹೀಗಾಗಿ, ದೇವರು ಮಾನವರಿಗೆ ಮಾರ್ಗದರ್ಶನ ಮಾಡಲಿ ಎಂದು ಪ್ರವಾದಿಗಳನ್ನು ಕಳುಹಿಸುತ್ತಿದ್ದರು. ಪ್ರವಾದಿಗಳು, ದೇವರ ಆಜ್ಞೆಗಳಿಗೆ ವಿಧೇಯರಾಗಿರಿ. ಪರಸ್ಪರ ಪ್ರೀತಿ, ಗೌರವದಿಂದ ಬಾಳಿರಿ ಎಂದು ಕರೆ ಕೊಟ್ಟಿದ್ದರು. ಮಾನವರು ಇದಕ್ಕೆ ಕಿವಿಗೊಡದೇ ಅಜ್ಞಾನದ ಕತ್ತಲು, ಪಾಪದ ಬಂಧನದಲ್ಲಿ ಜೀವನ ನಡೆಸಲು ಶುರುಮಾಡಿದರು. ಹೀಗಾಗಿ, ದೇವರು ತಾನೇ ಮನುಷ್ಯ ರೂಪದಲ್ಲಿ ಬಂದರು. ದೇವರು, ಮನುಷ್ಯನಾಗಿ ಹುಟ್ಟಿದ ಹಬ್ಬವೇ- ಕ್ರಿಸ್‌ಮಸ್‌. ಇದು ಕ್ರಿಸ್‌ಮಸ್‌ ಆಚರಣೆಯ ಹಿನ್ನೆಲೆ.

ಯೇಸು ಮನುಷ್ಯನಾಗಿ ಜನ್ಮ ತಾಳಿದ್ದು ಕನ್ಯಾ ಮರಿಯಮ್ಮ ಅವರಿಗೆ. ದನದ ಕೊಟ್ಟಿಗೆಯಲ್ಲಿ ಜನಿಸಿದ್ದರಿಂದ `ಗೋದಲಿ’ಯಲ್ಲಿ ಮಗು ಇರಿಸಲಾಗಿತ್ತು. ಆತ ಬಡವನಾಗಿ, ದೀನರಾಗಿ ಜನಿಸುವ ಮೂಲಕ ದೇವರು ಪ್ರಪಂಚವೇ ನಶ್ವರ ಎಂದು ಸಾರಿದರು; ಬಡತನದ ಹಿರಿಮೆ ತೋರಿಸಿಕೊಟ್ಟಿದ್ದಾರೆ. ಹಣ, ಆಸ್ತಿ, ಅಹಂಕಾರ ಬರಿದು ಮಾಡಿಕೊಂಡಾಗ ದೇವರ ಪ್ರೀತಿಗೆ ಪಾತ್ರವಾಗುತ್ತೇವೆ ಎಂಬುದು ಇದರ ಸಂದೇಶ. ಹೀಗಾಗಿ, ಕ್ರಿಸ್ಮಸ್‌ನಂದು ಚರ್ಚ್ ಬಳಿ `ಗೋದಲಿ’ ಮಾದರಿ ನಿರ್ಮಾಣ ಮಾಡಿ, ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ.
ಕ್ರಿಸ್ತ, ಆತ್ಮಕ್ಕೆ ಆದಾಯವಾಗುವಂಥ ಪ್ರತಿಫಲ ಅಪೇಕ್ಷಿಸಿರಿ. ಪರಹಿತ ಸಾಧನೆ, ಇತರರ ಕೊರತೆಗಳ ನೀಗಿಸುವ ದಾನ ಸುಗಂಧ ದ್ರವ್ಯದಂತೆ ದೇವರಿಗೆ ಸಮರ್ಪಿತ ಎಂದು ತಿಳಿಸಿದ್ದರು. ಹೀಗಾಗಿ, ಹಬ್ಬದ ಸಂದರ್ಭದಲ್ಲಿ ದಾನಕ್ಕೆ ಮಹತ್ವವಿದೆ.

ಏಸುಸ್ವಾಮಿ ಹುಟ್ಟಿದಾಗ, ಕುರಿ ಕಾಯುವವರಿಗೆ ಆಕಾಶದಲ್ಲಿ ಬೆಳಕು ಕಾಣಿಸಿತು. ಆ ಬೆಳಕಿನಲ್ಲಿ ದೇವದೂತರು ಕಾಣಿಸಿಕೊಂಡು, ಏಸು ಹುಟ್ಟಿದ ಸಂದೇಶ ನೀಡಿದರು. ದೂರದ ದೇಶಗಳಲ್ಲಿನ ಮೂವರು ಜ್ಯೋತಿಷಿಗಳಿಗೆ ಆಕಾಶದಲ್ಲಿ ನಕ್ಷತ್ರದ ಚಿಹ್ನೆ ಕಾಣಿಸಿತಂತೆ. ಈ ಹಿನ್ನೆಲೆಯಲ್ಲಿ, ನಕ್ಷತ್ರದ ಮಾದರಿಗಳನ್ನು ತೂಗು ಹಾಕುತ್ತಾರೆ. ಪರೋಪಕಾರವನ್ನು ಮೇಣದಬತ್ತಿ ಹಚ್ಚುವ ಆಚರಣೆ ಪ್ರತಿಬಿಂಬಿಸುತ್ತದೆ. ಇಷ್ಟಾರ್ಥ ಸಿದ್ಧಿಸಿದವರೂ ಸಹ ಹರಕೆ ತೀರಿಸಲು ಚರ್ಚ್ ಬಳಿ ಮೇಣದಬತ್ತಿ ಬೆಳಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT