ನವದೆಹಲಿ (ಐಎಎನ್ಎಸ್): ಮುಜ ಫ್ಫರ್ನಗರದ ಕೋಮುಗಲಭೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ. ‘ಇದು ಗೋಧ್ರಾ ಹತ್ಯಾಕಾಂಡಕ್ಕಿಂತ ಕೆಟ್ಟದ್ದು’ ಎಂದು ಹೇಳಿದ್ದಾರೆ.
‘ಮುಜಫ್ಫರ್ನಗರದ ಕೋಮುಗಲಭೆಯು 2002ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡಕ್ಕಿಂತ ಕೆಟ್ಟದ್ದು. ಇದಕ್ಕೆ ಉತ್ತರ ಪ್ರದೇಶ ಸರ್ಕಾರವೇ ನೇರ ಹೊಣೆ’ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ರಾಜ್ಯಸಭಾ ಸದಸ್ಯರಾಗಿ ಅಲ್ವಿ ಅವರು, ಪರಿಹಾರ ಶಿಬಿರಕ್ಕೆ ಗುರುವಾರ ಭೇಟಿ ಮಾಡಲು ಹೊರಟಾಗ ಪೊಲೀಸರು ಅವರನ್ನು ಲೋನಿ ಗಡಿಯ ಬಳಿ ತಡೆದರು.
‘ನಾನು ಲೋನಿ ಬಳಿಯ ಪರಿಹಾರ ಶಿಬಿರಕ್ಕೆ ಭೇಟಿ ನೀಡಿದ್ದೆ. ಅಷ್ಟರಲ್ಲೇ ಪೊಲೀಸರು ಅಲ್ಲಿಗೆ ಧಾವಿಸಿ ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಮುಜಫ್ಫರ್ನಗರಕ್ಕೆ ಪ್ರವೇಶಿಸದಂತೆ ಅವರಿಗೆ ಲಖನೌನಿಂದ ಆದೇಶ ಸಿಕ್ಕಿದೆ’ ಎಂದು ಹೇಳಿದರು.
ಗುಜರಾತ್ನಲ್ಲಿ 2002ರಲ್ಲಿ ನಡೆದ ಹತ್ಯಾಕಾಂಡವನ್ನು ನೋಡಿ ಬಂದಿದ್ದ ಅಲ್ವಿ ಅವರ ಪ್ರಕಾರ, ‘ಮುಜಫ್ಫರ್ ನಗರದಲ್ಲಿ ಸುಮಾರು 50 ಸಾವಿರ ಜನರು ನಿರಾಶ್ರಿತರಾಗಿದ್ದಾರೆ. ಮತ್ತು 6–7 ಕಡೆ ಪರಿಹಾರ ಶಿಬಿರಗಳನ್ನು ಆರಂಭಿಸಲಾಗಿದೆ. ಗಲಭೆಯಲ್ಲಿ ಸರ್ಕಾರದ ಅಂಕಿ ಅಂಶಗಳಿಗಿಂತ ಹೆಚ್ಚು ಜನರು ಮೃತಪಟ್ಟಿದ್ದಾರೆ. ಮೃತಪಟ್ಟವರ ಸಂಖ್ಯೆ 100ರ ಗಡಿ ದಾಟಿದೆ’ ಎಂದು ಹೇಳಿದ್ದಾರೆ.
ಲೋನಿ ಬಳಿಯ ಪರಿಹಾರ ಶಿಬಿರದಲ್ಲಿ ನೆಲೆಸಿರುವ ಸುಮಾರು ಎರಡು ಸಾವಿರ ಜನರು ಅಲ್ವಿ ಅವರ ಬಳಿ ತಮ್ಮ ವ್ಯಥೆ ಹೇಳಿಕೊಂಡರು.
‘ಗಲಭೆಯಲ್ಲಿ ಅನೇಕರನ್ನು ಕೊಲೆ ಮಾಡಿದ್ದರೂ ಇನ್ನೂ ಕೂಡ ಯಾವುದೇ ಪ್ರಕರಣಗಳನ್ನು ದಾಖಲಿಸಿಕೊಂಡಿಲ್ಲ. ನಿರಾಶ್ರಿತ ಶಿಬಿರದಿಂದ ಪೊಲೀಸರು ಸುಮಾರು 73 ಜನರು ತಮ್ಮ ಗ್ರಾಮಗಳಿಗೆ ಹಿಂದಕ್ಕೆ ಕಳುಹಿಸಿದ್ದರು. ಆದರೆ, ಅಲ್ಲಿ ತಮಗೆ ಸುರಕ್ಷತೆ ಇಲ್ಲ ಎಂದು ಶಿಬಿರಕ್ಕೆ ಹಿಂದಕ್ಕೆ ಮರಳಿದ್ದಾರೆ’ ಎಂದು ಅಲ್ವಿ ಹೇಳಿದರು.