ಬೀದರ್: ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಗೌರವಧನ ಹೆಚ್ಚಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ತಾಲ್ಲೂಕು ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ರ್ಯಾಲಿ ನಡೆಸಿದ ಸದಸ್ಯರು ಕಚೇರಿಯ ಆವರಣದಲ್ಲಿ ಕೆಲ ಕಾಲ ಧರಣಿ ನಡೆಸಿದರು. ಅನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ ಸಚಿವ ಜಗದೀಶ ಶೆಟ್ಟರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮಾಸಿಕ 5 ಸಾವಿರ, ಉಪಾಧ್ಯಕ್ಷರಿಗೆ 3 ಸಾವಿರ ಹಾಗೂ ಸದಸ್ಯರಿಗೆ 2 ಸಾವಿರ ರೂಪಾಯಿ ಗೌರವಧನ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರವಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸುವಂತಾಗಬೇಕು. ಅದಕ್ಕಾಗಿ ಮನೆ ಹಂಚಿಕೆ, ಪಡಿತರ ಚೀಟಿ, ಆಹಾರ ವಿತರಣೆ, ವಿಧವಾ, ವೃದ್ಧಾಪ್ಯ ವೇತನಕ್ಕಾಗಿ ಆಯ್ಕೆ ಮಾಡುವ ಅಧಿಕಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೇರಳ ಮಾದರಿಯಲ್ಲಿ ರಾಜ್ಯದಲ್ಲಿಯು ಪ್ರತಿ ಗ್ರಾಮ ಪಂಚಾಯಿತಿ ಐದು ಕೋಟಿ ರೂಪಾಯಿ ಅನುದಾನ ಕಲ್ಪಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮಂಡಿಸಿದ್ದಾರೆ.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ, ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಒಕ್ಕೂಟದ ಜಿಲ್ಲಾ ಸಂಚಾಲಕ ವಿಜಯಕುಮಾರ ಸೋನಾರೆ, ಸಹ ಸಂಚಾಲಕರಾದ ಶ್ರೀನಿವಾಸರೆಡ್ಡಿ ಚಿಲ್ಲರ್ಗಿ, ಸುರೇಶ ಪಾಟೀಲ್, ಗಫಾರಸಾಬ್, ಬಕ್ಕಪ್ಪ ದಂಡಿನ್, ಅವಿ ಅಲ್ಲೂರೆ, ಕಾರ್ಯನಿರ್ವಾಹಕ ಸದಸ್ಯರಾದ ಬಾಬುರಾವ ಕೌಠಾ, ಚಂದ್ರಪ್ಪ ಭಂಗೂರ ಮತ್ತಿತರರು ಸೇರಿದಂತೆ ನೂರಾರು ಜನ ಸದಸ್ಯರು ಪಾಲ್ಗೊಂಡಿದ್ದರು.