ದಾವಣಗೆರೆ: ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯ್ತಿಗಳಿಗೆ ಫೆ. 6ರಂದು ಚುನಾವಣೆ ನಡೆಯಲಿದ್ದು, ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.ಬೇತೂರು ಗ್ರಾ.ಪಂ.ಗೆ ಚುನಾವಣಾ ಅಧಿಕಾರಿಯಾಗಿ ರಾಮಚಂದ್ರಪ್ಪ, ಸಹಾಯಕ ಚುನಾವಣಾಧಿಕಾರಿಯಾಗಿ ಬಸವರಾಜ್, ಕನಗೊಂಡನಹಳ್ಳಿ ಗ್ರಾ.ಪಂ.ಗೆ ಅಜಿತ್ ಪಾಟೀಲ್, ಸಹಾಯಕರಾಗಿ ಎಂ.ವಿ. ವೆಂಕಟೇಶ್, ಕುಕ್ಕುವಾಡ ಗ್ರಾ.ಪಂ.ಗೆ ಜಗದೀಶ್ವರ್, ಸಹಾಯಕರನ್ನಾಗಿ ರೇವಣಸಿದ್ದಪ್ಪ, ಮಾಯಕೊಂಡ ಗ್ರಾ.ಪಂ.ಗೆ ಎಂ.ಎಸ್. ಪಾಟೀಲ್, ಸಹಾಯಕರನ್ನಾಗಿ ಎಸ್.ಎಂ. ಮುದುಕಣ್ಣನವರ್ ಅವರನ್ನು ನೇಮಕ ಮಾಡಲಾಗಿದೆ.
ನಾಲ್ಕು ಗ್ರಾಮ ಪಂಚಾಯ್ತಿಯಿಂದ 59 ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, 20 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿ 80 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ನೀತಿ ಸಂಹಿತೆ: ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲೂ ನೀತಿಸಂಹಿತೆ ಜಾರಿಯಲ್ಲಿದ್ದು, ಅನುಷ್ಠಾನಕ್ಕೆ ತಂಡಗಳನ್ನು ರಚಿಸಲಾಗಿದೆ. ನೀತಿಸಂಹಿತೆ ಜಾರಿಯಲ್ಲಿ ಇರುವುದರಿಂದ ಚುನಾವಣೆ ನಡೆಯುವ ಗ್ರಾ.ಪಂ. ವ್ಯಾಪ್ತಿಯಲ್ಲಿ ಯಾವುದೇ ಹೊಸ ಕಾಮಗಾರಿ, ಸರ್ಕಾರದ ಹೊಸ ಕಾರ್ಯಕ್ರಮಗಳನ್ನು ಆರಂಭಿಸುವಂತಿಲ್ಲ. ಆದರೆ, ಈಗಾಗಲೇ ಪ್ರಗತಿಯಲ್ಲಿ ಇರುವ ಕಾಮಗಾರಿಗೆ ನೀತಿಸಂಹಿತೆ ಅನ್ವಯಿಸುವುದಿಲ್ಲ ಎಂದು ತಹಶೀಲ್ದಾರ್ ಬಿ.ಆರ್. ಹರೀಶ್ ತಿಳಿಸಿದ್ದಾರೆ.