ತ್ಯಾವಣಿಗೆ: ಸಮೀಪದ ಮಲ್ಲಾಪುರ ಗ್ರಾಮ ಪಂಚಾಯಿತಿಯ ಪ್ರಥಮ ಹಂತದ ಗ್ರಾಮ ಸಭೆಯನ್ನು ಪಂಚಾಯ್ತಿ ಅಧ್ಯಕ್ಷೆ ರುದ್ರಮ್ಮ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆಸಲಾಯಿತು.
ಸಭೆ ಪ್ರಾರಂಭಿಸುತ್ತಿದ್ದಂತೆಯೇ ಗ್ರಾಮಸ್ಥರು ಇತರ ಇಲಾಖೆಯ ಅಧಿಕಾರಿಗಳು ಗೈರು ಹಾಜರಾದ ಬಗ್ಗೆ ಖಂಡಿಸಿ ಅವರು ಬರುವವರೆಗೆ ಗ್ರಾಮ ಸಭೆಯನ್ನು ಮುಂದಕ್ಕೆ ಹಾಕುವಂತೆ ಆಗ್ರಹಿಸಿದರು.
ಕಾರ್ಯದರ್ಶಿ ಎನ್.ಆರ್. ರಂಗಸ್ವಾಮಿ ಮಾತನಾಡಿ, ನಾವು ಹೋಬಳಿಮಟ್ಟದ ಎ್ಲ್ಲಲ ಇಲಾಖೆಯ ಅಧಿಕಾರಿಗಳಿಗೆ ಲಿಖಿತವಾಗಿ ಗ್ರಾಮಸಭೆಗೆ ಹಾಜರಾಗಲು ತಿಳಿಸಲಾಗಿದ್ದರೂ ಸಹಾ ಕೇವಲ ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತೆಯರು ಹಾಜರಾಗಿದ್ದಾರೆ ಎಂದರು.
ನಂತರ ವಿವಿಧ ಇಲಾಖೆಯ ಅಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಅವರು ಬಂದ ನಂತರ ಸಭೆ ನಡೆಸಲಾಯಿತು.
ಸಭೆಯಲ್ಲಿ 2011-12ನೇ ಸಾಲಿನ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾಯೋಜನೆ ತಯಾರಿಸಲಾಯಿತು. ಬಸವ ಇಂದಿರಾ ವಸತಿ ಯೋಜನೆ ಹಾಗೂ ಇಂದಿರಾ ಆವಾಸ್ ವಸತಿ ಯೋಜನೆ ಅಡಿ ಫಲಾನುಭವಿಗಳ ಆಯ್ಕೆಯಲ್ಲಿ ಗೊಂದಲ ಉಂಟಾಯಿತು. ಅರ್ಜಿ ಸಲ್ಲಿಸಿದ ಫಲಾನುಭವಿಗಳ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳ ಆಯ್ಕೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪುರಸ್ಕಾರ ಕಾರ್ಯಕ್ರಮ
ಸಮೀಪದ ಕರೇಕಟ್ಟೆ ತಾಂಡದಲ್ಲಿ ಸ್ಫೂರ್ತಿ ಸಂಸ್ಥೆ ಸಂತೇಬೆನ್ನೂರು ವಿಭಾಗ ವತಿಯಿಂದ ಈಚೆಗೆ ಸ್ವ-ಸಹಾಯ ಸಂಘಗಳ ಅನುಭವ ಹಂಚಿಕೆ ಮತ್ತು ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಬಸವರಾಜ ನಾಯ್ಕ, ಚನ್ನಗಿರಿ ತಾ.ಪಂ. ಉಪಾಧ್ಯಕ್ಷ ಗಣೇಶ ನಾಯ್ಕ, ತಾ.ಪಂ. ಸದಸ್ಯರಾದ ಲಕ್ಷ್ಮೀಬಾಯಿ, ಶಾಂತಕುಮಾರ್. ಸ್ಫೂರ್ತಿ ಸಂಸ್ಥೆ ನಿರ್ದೇಶಕ ಕೆ.ಬಿ. ರೂಪಾನಾಯ್ಕ ಇತರರು ಹಾಜರಿದ್ದರು.