ಮಹದೇವಪುರ: ವೈಟ್ಫೀಲ್ಡ್ ಸಮೀಪದ ಇಸಿಸಿ ರಸ್ತೆಯ ನಡುವೆ ಬಿಬಿಎಂಪಿ ಜಲ್ಲಿ ಕಲ್ಲು, ಮರಳು ಸಾಮಗ್ರಿಗಳನ್ನು ಸುರಿದುಕೊಂಡು ಚರಂಡಿ ಕಾಮಗಾರಿ ನಡೆಸುತ್ತಿದೆ. ಇದರಿಂದ ಸಾರ್ವಜನಿಕರು ರಸ್ತೆಯಲ್ಲಿ ಸರಾಗವಾಗಿ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೆ ದ್ವಿಚಕ್ರ ವಾಹನ ಸವಾರರು ರಸ್ತೆಯ ಮಧ್ಯೆ ಇರುವ ಜಲ್ಲಿ ಕಲ್ಲುಗಳ ಮೇಲೆ ಸಂಚರಿಸುವಾಗ ಜಾರಿ ಬಿದ್ದು ಆಸ್ಪತ್ರೆ ಸೇರುತ್ತಿದ್ದಾರೆ. ಈ ಬಗ್ಗೆ ಮಹಾನಗರ ಪಾಲಿಕೆಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಕಳೆದ ಎರಡು ತಿಂಗಳುಗಳಿಂದಲೂ ನಡೆಯುತ್ತಿರುವ ಕಾಮಗಾರಿ ಆಮೆಗತಿಯಿಂದ ಸಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಕಾಮಗಾರಿ ಕಾಡುಗೋಡಿ ವಾರ್ಡ್ ವ್ಯಾಪ್ತಿಗೆ ಸೇರಿದ್ದು, ವೈಟ್ ಫೀಲ್ಡ್ನಿಂದ ಐಟಿಪಿಎಲ್ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕೊಂಡಿಯಾಗಿರುವ ರಸ್ತೆಯಲ್ಲಿ ದಿನವೂ ಸಾವಿರಾರು ವಾಹನಗಳು ಓಡಾಡುತ್ತಿವೆ. ರಸ್ತೆಯ ನಡುವೆ ರಾಶಿ ರಾಶಿ ಜಲ್ಲಿ, ಮರಳು ಬಿದ್ದಿರುವುದರಿಂದ ವಾಹನ ಸವಾರರು ಪ್ರಯಾಸದಿಂದ ಸಂಚರಿಸುವಂತಾಗಿದೆ. ಪಾಲಿಕೆ ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.