ಬೆಂಗಳೂರು: ಉದ್ಯಾನ ನಗರಿಯಲ್ಲಿ ಈಗ ಮತ್ತೆ ಕ್ರಿಕೆಟ್ ಕಲರವ. ಕ್ರಿಕೆಟ್ನೊಂದಿಗೆ ಸಂಗೀತದ ನಿನಾದವೂ ಹರಿಯಲು ಈಗ ವೇದಿಕೆ ಸಜ್ಜುಗೊಂಡಿದೆ. ಅಬ್ಬರದ ಸಂಗೀತದ ಲಯದೊಂದಿಗೆ ವಿವಿಧ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಕಾರ್ಯಕ್ರಮವೂ ನಡೆಯಲಿದೆ.
ಅದಕ್ಕೆ ಕಾರಣ ಅರಮನೆ ಮೈದಾನದಲ್ಲಿ ಗುರುವಾರ ಸಂಜೆ ಆರು ಗಂಟೆಗೆ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಉದ್ಘಾಟನಾ ಸಮಾರಂಭ ಜರುಗಲಿದೆ. ಕಾರಣಾಂತರಗಳಿಂದ ಈ ಬಾರಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯುತ್ತಿಲ್ಲ.
ಸುಮಾರು ಒಂದು ತಾಸು ಈ ಕಾರ್ಯಕ್ರಮ ನಡೆಯಲಿದ್ದು, ಸಾಂಸ್ಕೃತಿಕ ಸಂಗಮವನ್ನು ಪ್ರದರ್ಶಿಸಲಾಗುತ್ತದೆ. 10 ತಂಡಗಳ ನಾಯಕರು ತಮ್ಮ ತಂಡದ ಧ್ವಜಗಳನ್ನು ಹಸ್ತಾಂತರ ಮಾಡಿಕೊಳ್ಳಲಿದ್ದಾರೆ.
ಸಂಗೀತ ಮಾಂತ್ರಿಕರಾದ ಅಮೆರಿಕದ ಟ್ರಾಮರ್ ದಿಲ್ಲಾರ್ಡ್, ಕ್ರಿಸ್ಟೋಫರ್ ಬ್ರಯಾನ್ ಹಾಗೂ ಇಂಗ್ಲೆಂಡ್ನಲ್ಲಿ ನೆಲೆಸಿರುವ ಪಂಜಾಬ್ ಮೂಲದ ಕಮಲ್ ಸಿಂಗ್ ಜೂತಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಡಿಜೆ ಕರೊಲಿನಾ ಕಾರ್ಟೆಲ್ ತಮ್ಮ ಸಂಗೀತದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.
ಉದ್ಘಾಟನಾ ಪಂದ್ಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ದಕ್ಷಿಣ ಆಫ್ರಿಕಾದ ವಾರಿಯರ್ಸ್ ನಡುವೆ ಶುಕ್ರವಾರ ರಾತ್ರಿ ನಡೆಯಲಿದೆ. 16 ದಿನ ನಡೆಯಲಿರುವ ಈ ಟೂರ್ನಿಯ ಫೈನಲ್ ಅಕ್ಟೋಬರ್ 9ರಂದು ಚೆನ್ನೈನಲ್ಲಿ ಜರುಗಲಿದೆ.
ಐಪಿಎಲ್ ನಾಲ್ಕನೇ ಅವತರಣಿಕೆಯಲ್ಲಿ ಚಾಂಪಿಯನ್ ಆದ ಚೆನ್ನೈ ಸೂಪರ್ ಕಿಂಗ್ಸ್, ರನ್ನರ್ ಅಪ್ ರಾಯಲ್ ಚಾಲೆಂಜರ್ಸ್ ಹಾಗೂ ಮೂರನೇ ಸ್ಥಾನ ಪಡೆದ ಮುಂಬೈ ಇಂಡಿಯನ್ಸ್ ಭಾರತವನ್ನು ಪ್ರತಿನಿಧಿಸಲಿವೆ. ನಾಲ್ಕನೇ ಸ್ಥಾನ ಪಡೆದಿದ್ದ ಕೋಲ್ಕತ್ತ ನೈಟ್ ರೈಡರ್ಸ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗೆದ್ದು ಪ್ರಧಾನ ಹಂತದಲ್ಲಿ ಸ್ಥಾನ ಪಡೆಯಬೇಕಾಗಿದೆ.