ಮೈಸೂರು: ಸಿ. ಪ್ರೇಮ್ ಮತ್ತು ಹರ್ಷಿತಾ ಸೋಮವಾರ ನಡೆದ ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತುವ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗಗಳಲ್ಲಿ ಪ್ರಥಮ ಪ್ರಶಸ್ತಿ ಗೆದ್ದರು.
ದಸರಾ ಸಾಹಸ ಕ್ರೀಡಾ ಉಪಸಮಿತಿಯ ಆಶ್ರಯದಲ್ಲಿ ಬೆಳಿಗ್ಗೆ ನಡೆದ ಚಾಮುಂಡಿ ಬೆಟ್ಟದ ಮೆಟ್ಟಿಲು ಸ್ಪರ್ಧೆಯಲ್ಲಿ 11 ನಿಮಿಷ ಮತ್ತು 36ಸೆಕೆಂಡುಗಳಲ್ಲಿ 1101 ಮೆಟ್ಟಿಲುಗಳನ್ನು ಹತ್ತಿ ನಿಂತ ಸಿ. ಪ್ರೇಮ್ ಗೆಲುವಿನ ನಗೆ ಬೀರಿದರು. ಸತ್ಯನಾರಾಯಣ ಮತ್ತು ಮಲ್ಲೇಶ್ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.
ಮಹಿಳೆಯರ ವಿಭಾಗದಲ್ಲಿ ಹರ್ಷಿತಾ 19ನಿಮಿಷ, 18 ಸೆಕೆಂಡುಗಳಲ್ಲಿ ಗುರಿ ಮಟ್ಟಿ ಪ್ರಥಮ ಪ್ರಶಸ್ತಿ ಗೆದ್ದುಕೊಂಡರು. ರೂಪಶ್ರೀ ಮತ್ತು ಎನ್. ಪುಷ್ಪ ದ್ವಿತೀಯ ಮತ್ತು ತೃತೀಯ ಪ್ರಶಸ್ತಿ ಗಳಿಸಿದರು.
ವಿಶೇಷ ಪ್ರಶಸ್ತಿಗಳು:
ಸ್ವಾಮಿಯವರಿಗೆ ವಯಸ್ಸು 71 ಆದರೂ ಉತ್ಸಾಹ ಮಾತ್ರ ಕುಂದಿಲ್ಲ. ತಾವು ಚಿರಯುವಕ ಎಂಬುದನ್ನು ಅವರು ಮೆಟ್ಟಿಲು ಹತ್ತುವ ಸ್ಪರ್ಧೆಯ ಪ್ರೋತ್ಸಾಹಕ ಪ್ರಶಸ್ತಿ ಪಡೆಯುವ ಮೂಲಕ ಸಾಬೀತುಪಡಿಸಿಬಿಟ್ಟರು.
ನಾನೂ ಕಮ್ಮಿ ಇಲ್ಲ ಎಂದ ಒಂಬತ್ತು ವಯಸ್ಸಿನ ಪೋರ ಮಿಥುನ್ ಕೂಡ ಸರಸರನೆ ಮೆಟ್ಟಿಲುಗಳನ್ನು ಏರಿ ನಿಂತು ವಿಶೇಷ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡುಬಿಟ್ಟ.
ಮಹಿಳೆಯರ ವಿಭಾಗದಲ್ಲಿಯೂ ಇಂತಹ ವಿಶೇಷ ಇತ್ತು. ಹಿರಿಯ ಮಹಿಳೆ ಅನುಜಾ ಮತ್ತು ಎಂಟು ವರ್ಷದ ಬಾಲಕಿ ಕೀರ್ತನಾ ಪ್ರೋತ್ಸಾಹಕ ಪ್ರಶಸ್ತಿ ಗಳಿಸಿದರು.
ಉಪಸಮಿತಿ ಅಧ್ಯಕ್ಷ ಬಿ.ಕೆ. ಮಂಜುನಾಥ, ಕಾರ್ಯದರ್ಶಿ ಡಾ. ರುದ್ರಯ್ಯ ಮತ್ತು ಕಾರ್ಯಾಧ್ಯಕ್ಷ ನಟರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಫಲಿತಾಂಶಗಳು:
ಪುರುಷರು: ಸಿ. ಪ್ರೇಮ್ (ಕಾಲ:11ನಿಮಿಷ,36ಸೆಕೆಂಡು) -1, ಸತ್ಯನಾರಾಯಣ ( 13ನಿ, 29ಸೆ)-2, ಮಲ್ಲೇಶ್ (14ನಿ)-3; ಪ್ರೋತ್ಸಾಹಕ ಪ್ರಶಸ್ತಿ: ಸ್ವಾಮಿ ಮತ್ತು ಮಿಥುನ್.
ಮಹಿಳೆಯರು: ಹರ್ಷಿತಾ (19ನಿ, 18ಸೆ)-1, ರೂಪಶ್ರೀ (20ನಿ,22ಸೆ)-2, ಎನ್. ಪುಷ್ಪ (22ನಿ, 36ಸೆ) -3; ಪ್ರೊತ್ಸಾಹಕ ಪ್ರಶಸ್ತಿ: ಅನುಜಾ ಮತ್ತು ಕೀರ್ತನಾ.