ಮಂಗಳೂರು: ನಗರದ ಟ್ಯಾಕ್ಸಿ ಚಾಲಕ ಹಾಗೂ ದಲಿತ ಯುವಕ ಗೋವರ್ಧನ್ ಅವರ ಹತ್ಯೆಯಾಗಿ ಹಲವು ದಿನಗಳೇ ಕಳೆದಿದ್ದರೂ ಪೊಲೀಸರು ಹಂತಕರನ್ನು ಇನ್ನೂ ಪತ್ತೆ ಹಚ್ಚದೇ ಇರುವುದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಬಣ) ವತಿಯಿಂದ ಶುಕ್ರವಾರ ನಗರದಲ್ಲಿ ಮೆರವಣಿಗೆ ಮತ್ತು ಪ್ರತಿಭಟನಾ ಪ್ರದರ್ಶನ ನಡೆಯಿತು.
ಬಾವುಟಗುಡ್ಡೆಯಿಂದ ಮೆರವಣಿಗೆಯಲ್ಲಿ ಸಾಗಿಬಂದ ನೂರಾರು ಮಂದಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿದರು. ವಾರಗಳೇ ಕಳೆದರೂ ಹಂತಕರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.
ದ.ಸಂ.ಸ.-ಕೃಷ್ಣಪ್ಪ ಬಣ ರಾಜ್ಯ ಸಂಚಾಲಕ ಸತ್ಯ ಭದ್ರಾವತಿ ಮಾತನಾಡಿ, 15 ದಿನಗಳೊಳಗೆ ಹಂತಕರನ್ನು ಪತ್ತೆ ಹಚ್ಚಿ ಬಂಧಿಸದೆ ಇದ್ದಲ್ಲಿ ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪೊರಕೆ ಪ್ರದರ್ಶನ ನಡೆಸಲಾಗುವುದು. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಜಿಲ್ಲೆಯಲ್ಲಿ ಸಂಚರಿಸುವುದಕ್ಕೂ ಅಡ್ಡಿಪಡಿಸಲಾಗುವುದು ಎಂದು ಎಚ್ಚರಿಸಿದರು.
ದ.ಸಂ.ಸ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್, ಶೇಖರ ಹೆಜಮಾಡಿ, ಶ್ರೀನಿವಾಸನ್, ಸುಂದರ ಉಳ್ಳಾಲ್ ಮತ್ತಿತರರು ಇದ್ದರು.