ಚಿಂತಾಮಣಿ: ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಆರಂಭವಾದ ಪ್ರಥಮ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಗರದ ಬಾಲಕರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಫೆಬ್ರವರಿ 23 ಮತ್ತು 24 ರಂದು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಸಮಿತಿಯ ತಜ್ಞರ ತಂಡ (ನ್ಯಾಕ್) ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ 1965 ರಲ್ಲಿ ಪುರಸಭೆಯ ವತಿಯಿಂದ ರಾಜ್ಯದಲ್ಲೇ ಪ್ರಥಮವಾಗಿ ಮುನಿಸಿಫಲ್ ಪ್ರಥಮ ದರ್ಜೆ ಕಾಲೇಜನ್ನು ದಿವಂಗತ ಎಂ.ಸಿ.ಆಂಜನೇಯರೆಡ್ಡಿಯವರ ಆರಂಭಿಸಿದರು.ಕಾಲೇಜಿಗೆ ಸರ್ಕಾರ ಅನುದಾನ ನೀಡುತ್ತಿತ್ತು. ನಂತರ 1986 ರಲ್ಲಿ ಸರ್ಕಾರ ಕಾಲೇಜನ್ನು ತನ್ನ ವಶಕ್ಕೆ ತೆಗೆದುಕೊಂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎಂದು ನಾಮಕರಣ ಮಾಡಿತು.
ಅಂದಿನಿಂದ ಇಂದಿನವರೆಗೆ ಕಾಲೇಜು ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಕಾಲೇಜಿನಲ್ಲಿ ಉತ್ತಮ ಉಪನ್ಯಾಸಕ ವರ್ಗವಿದ್ದು ಯಾವುದೇ ಖಾಸಗಿ ಕಾಲೇಜಿಗೆ ಕಡಿಮೆ ಇಲ್ಲದಂತೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಪ್ರತಿವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. 2004-05 ರಲ್ಲಿ ನ್ಯಾಕ್ ಸಮಿತಿಯಿಂದ ಬಿ.ಪ್ಲಸ್ ಶ್ರೇಣಿ ಪಡೆದಿದ್ದ ಕಾಲೇಜಿಗೆ ಮತ್ತೆ ಐದು ವರ್ಷಗಳ ನಂತರ ನ್ಯಾಕ್ ಸಮಿತಿ ಭೇಟಿ ನೀಡುತ್ತಿದೆ. ಸಮಿತಿಯ ತಜ್ಞರನ್ನು ಬರಮಾಡಿಕೊಳ್ಳಲು ಎಲ್ಲ ಸಿದ್ದತೆಗಳು ನಡೆದಿವೆ.ಸಮಿತಿಯು ಕಾಲೇಜಿನ ಪಠ್ಯಾಧಾರಿತ ವಿಷಯಗಳು, ಬೋಧನೆ ಮತ್ತು ಕಲಿಕೆಯ ಮೌಲ್ಯಮಾಪನ, ವಿದ್ಯಾರ್ಥಿಗಳ ಪ್ರಗತಿ, ಸಂಶೋದನೆ, ಮೂಲಭೂತ ಸೌಕರ್ಯಗಳ ಬಗ್ಗೆ ತಜ್ಞರು ಪರಿಶೀಲನೆ ನಡೆಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿ ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ.
ಸಮಾಜಕ್ಕೆ ಅನೇಕ ನ್ಯಾಯಾಧೀಶರು, ವಕೀಲರು, ಕೆ.ಎ.ಎಸ್ ಅಧಿಕಾರಿಗಳನ್ನು, ಮೌಲ್ಯಯುತ ರಾಜಕಾರಣಿಗಳನ್ನು, ಹೋರಾಟಗಾರರನ್ನು ಸಮಾಜ ಸೇವಕರನ್ನು ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಕೊಡುಗೆಯಾಗಿ ನೀಡಿದೆ. ಶಾಸಕ ಡಾ.ಎಂ.ಸಿ. ಸುಧಾಕರ್ ರವರ ಪ್ರಯತ್ನದಿಂದ ಪ್ರಗತಿಯತ್ತ ದಾಪುಗಾಲು ಇಡುತ್ತಿದ್ದು ಸಾಕಷ್ಟು ಅಭಿವೃದ್ದಿಯಾಗಿ ರಾಜ್ಯದ ಗಮನ ಸೆಳೆದಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೊಸ ಹೊಸ ಕೋರ್ಸ್ಗಳನ್ನು ತೆರೆಯಲಾಗಿದೆ. ನ್ಯಾಕ್ ಸಮಿತಿಯ ಭೇಟಿಗೆ ಕಾಲೇಜು ಸಿದ್ದವಾಗಿದ್ದು ಬುಧವಾರ ಮತ್ತು ಗುರುವಾರ ಸಮಿತಿಯ ತಜ್ಞರು ಕಾಲೇಜನ್ನು ಪರಿಶೀಲಿಸಿ ಶ್ರೇಣಿಯನ್ನು ನೀಡಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.