ಜಮಖಂಡಿ: ಕೃಷ್ಣಾ ನದಿಗೆ ಹರಿದು ಬರುತ್ತಿರುವ ನೀರು ಶುಕ್ರವಾರ ಸಂಜೆ ವೇಳೆಗೆ ತಾಲ್ಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್ ದಾಟಿ ಮುಂದೆ ಸಾಗುತ್ತಿದ್ದು, ಕೃಷ್ಣಾ ನದಿ ತೀರದ ಜನತೆಯ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಸುಮಾರು 4 ತಿಂಗಳುಗಳ ಕಾಲ ಕೃಷ್ಣಾ ನದಿ ಬತ್ತಿಬರಿದಾಗಿತ್ತು. ಜನ ಮತ್ತು ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವ ಪ್ರಸಂಗ ಬಂದೊದಗಿತ್ತು. ಬೆಳೆದು ನಿಂತಿದ್ದ ಕಬ್ಬು, ಬಾಳೆ, ಅರಿಷಿಣ ಮುಂತಾದ ಬೆಳೆಗಳು ನೀರಿಲ್ಲದೆ ಒಣಗಿ ನಿಂತಿದ್ದವು.
ಈಗ ನದಿಗೆ ನೀರು ಹರಿದು ಬಂದಿರುವುದರಿಂದ ಬೆಳೆಗಳಿಗೆ ನೀರು ಉಣಿಸಲು ಉಪಯೋಗವಾಗಲಿದೆ. ಇಳುವರಿ ಕಡಿಮೆ ಆದರೂ ಚಿಂತೆಯಿಲ್ಲ ಬೆಳೆಗಳನ್ನು ಉಳಿಸಿಕೊಂಡರೆ ಸಾಕು ಎಂದು ರೈತರು ಸಮಾಧಾನ ಪಡುವಂತಾಗಿದೆ. ಕೊನೆಗೂ ನೀರು ಬಂತು ಎಂದು ಕೆಲವರು ನಿಟ್ಟುಸಿರು ಕೂಡ ಬಿಡುವಂತಾಗಿದೆ.
ಹರಿದು ಬಂದಿರುವ ನೀರು ಮಳೆಯ ಹೊಸ ನೀರಿನಂತೆ ಕಾಣುತ್ತಿಲ್ಲ. ಬಹುಶಃ ನಿಂತು ಮಲಿನ ನೀರಿನಂತೆ ತೋರುತ್ತದೆ. ಕಾರಣ ನೀರನ್ನು ಶುದ್ಧೀಕರಿಸಿ ಕುಡಿಯುವುದು ಸುರಕ್ಷಿತ.
ನೀರಿನ ಓಟ ಅಷ್ಟೇನೂ ಬಿರುಸಾಗಿಲ್ಲ. ತೆಳ್ಳಗೆ ನೀರು ಹರಿದು ಬರುತ್ತಿದೆ. ನದಿಯ ಒಡಲಿನಲ್ಲಿನ ಉಸುಕು ಮತ್ತು ದಡದಲ್ಲಿನ ಮಣ್ಣು ಖಾಲಿಯಾಗಿದ್ದು, ನದಿಗೆ ಪ್ರವಾಹ ಬಂದಾಗ ನದಿಯ ವಿಸ್ತಾರದಲ್ಲಿ ಹೆಚ್ಚಳ ಆಗುವ ಅಪಾಯವಿದೆ.