ಚಿತ್ರದುರ್ಗ: ಮಹಿಳೆಯ ಬದುಕು ಅಲ್ಲಿ ಅನಾವರಣಗೊಂಡಿತ್ತು. ಅತ್ಯಾಚಾರ, ದೌರ್ಜನ್ಯ, ಶೋಷಣೆ, ಕಣ್ಣೀರಿನಲ್ಲಿ ಬದುಕು ಸಾಗಿಸುವ ನರಕಯಾತನೆಯನ್ನು ಎಳೆ ಎಳೆಯಾಗಿ ಅಲ್ಲಿ ಬಿಂಬಿಸಲಾಗಿತ್ತು. ಕಲಾಕೃತಿಗಳಲ್ಲಿ ಮೂಡಿಬಂದ ಮಹಿಳೆಯ ಸ್ಥಿತಿಗತಿಯ ಕುರಿತ ಈ ಅವಲೋಕನ ಮೌನ ಪ್ರತಿಭಟನೆಗೂ ಸಾಕ್ಷಿಯಾಗಿತ್ತು.
-ಇದು `ಚಿತ್ರದುರ್ಗದಲ್ಲಿ ಚಿತ್ರಸಂತೆ'ಯ ಕಥಾವಸ್ತು. ನಗರದ ಹೊಸ ನಗರಸಭೆ ಕಟ್ಟಡ ಮುಂಭಾಗದಲ್ಲಿ ಎಸ್ಜೆಎಂ ಚಿತ್ರಕಲಾ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ಚಿತ್ರಸಂತೆ ಗಮನಸೆಳೆಯಿತು. ಶುಕ್ರವಾರ ಆರಂಭವಾದ ಈ ಚಿತ್ರಸಂತೆ ಜ. 27ರವರೆಗೆ ನಡೆಯಲಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಯುವತಿಯ ಮೇಲಿನ ಅತ್ಯಾಚಾರದ ಪ್ರಕರಣದ ಹಿನ್ನೆಲೆಯಲ್ಲಿ ಸುಮಾರು 50 ಕಲಾಕೃತಿಗಳನ್ನು ರಚಿಸಲಾಗಿದೆ. `ಬುದ್ಧ ಮತ್ತು ನಾನು' ಹಾಗೂ ದೆಹಲಿ ಅತ್ಯಾಚಾರ ಘಟನೆಯ ಸರಣಿ ಚಿತ್ರಗಳನ್ನು ಪ್ರಮುಖವಾಗಿ ಇಲ್ಲಿಡಲಾಗಿದೆ.
ಆಧುನಿಕ ಕಲೆ, ಅಮೂರ್ತ ಕಲೆ, ನೈಜ ಕಲೆ ಹಾಗೂ ಐತಿಹಾಸಿಕ ತಾಣಗಳು, ಸ್ಮಾರಕಗಳ ಅನೇಕ ಕಲಾಕೃತಿಗಳು ಇಲ್ಲಿವೆ. 35 ವಿದ್ಯಾರ್ಥಿಗಳ ಸುಮಾರು 750 ಕಲಾಕೃತಿಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.
ರಾಜವೀರ ಮದಕರಿನಾಯಕ ಅವರ ಮ್ಯೂರಲ್ ಕಲಾಕೃತಿಯನ್ನು ವಿದ್ಯಾರ್ಥಿಗಳಾದ ಶಾಂತಕುಮಾರ್, ಗುರುಪ್ರಸಾದ್, ಕರುಣಾಕರ, ವಿಜಯೇಂದ್ರ, ತಿಪ್ಪೇಸ್ವಾಮಿ ರಚಿಸಿದ್ದಾರೆ. ಇದಕ್ಕಾಗಿ ಅವರು ಕಳೆದ ಎರಡು ತಿಂಗಳಿಂದ ಶ್ರಮಪಟ್ಟಿದ್ದಾರೆ.
8 ್ಡ 10 ಅಳತೆಯ ಮ್ಯೂರಲ್ ಗಮನಸೆಳೆಯುತ್ತಿದೆ. ಸಂತೆಯಲ್ಲಿ 3 ಅಡಿ ಎತ್ತರದ ಆಂಜನೇಯ, ಬುದ್ಧನ ಪ್ರತಿಮೆ, ವಿಘ್ನನಿವಾರಕನ ಕಲಾಕೃತಿಗಳಿವೆ. ಕಲೆ ಮೂಲಕ ಸಂದೇಶ ನೀಡುವ ಪ್ರಯತ್ನ ಮಾಡಲಾಗಿದೆ. ಚಿತ್ರಸಂತೆಗಾಗಿ ಎರಡು ತಿಂಗಳಿಂದ ವಿದ್ಯಾರ್ಥಿಗಳು ಮತ್ತು ನಾವು ಶ್ರಮಿಸಿದ್ದೇವೆ. ಕಳೆದ ವರ್ಷ ಚಿತ್ರಸಂತೆಯಲ್ಲಿ ್ಙ 30 ಸಾವಿರ ಕಲಾಕೃತಿಗಳು ಮಾರಾಟವಾಗಿದ್ದವು. ಈ ಬಾರಿ ಈಗಾಗಲೇ ್ಙ 18 ಸಾವಿರ ಮೊತ್ತದ ಕಲಾಕೃತಿಗಳು ಮಾರಾಟವಾಗಿವೆ. ಉಡುಪಿಯ ಕಲಾಸಕ್ತರೊಬ್ಬರು ್ಙ 5,500 ಮೊತ್ತದ ಕಲಾಕೃತ್ನಿ ಖರೀದಿಸಿದರು ಎಂದು ಎಸ್ಜೆಎಂ ಪ್ರಾಂಶುಪಾಲ ಸಿ. ಕಣ್ಮೇಶ್ ಹೇಳುತ್ತಾರೆ.