ಹೈದರಾಬಾದ್: ಹಲವು ದಶಕಗಳ ಹೋರಾಟದ ಫಲವಾಗಿ, ದೇಶದ 29ನೇ ರಾಜ್ಯವಾಗಿ ಒಡಮೂಡಲಿರುವ ನವ ‘ತೆಲಂಗಾಣ’ದ ಮೊದಲ ಸರ್ಕಾರ ರಚನೆಯಲ್ಲಿ ಹೈದರಾಬಾದ್ ಮತದಾರರ ಪಾತ್ರ ನಿರ್ಣಾಯಕ ಆಗಲಿದೆ.
ಬೃಹತ್ ಹೈದರಾಬಾದ್ ಮಹಾನಗರಪಾಲಿಕೆಯು 24 ವಿಧಾನಸಭಾ ಕ್ಷೇತ್ರಗಳನ್ನು ಒಡಲಲ್ಲಿ ಇರಿಸಿಕೊಂಡಿದೆ. ಪ್ರಧಾನವಾಗಿ ಮೂರು ಹಾಗೂ ಒಟ್ಟಾರೆ ಐದು ಲೋಕಸಭಾ ಕ್ಷೇತ್ರಗಳಲ್ಲಿ ಇವು ಹರಡಿಕೊಂಡಿವೆ. ಈ ‘ಭಾಗ್ಯನಗರ’ದ ಮತದಾರರನ್ನು ಒಲಿಸಿಕೊಳ್ಳಲು, ಪರ್ಯಾಯ ರಾಜಕೀಯದ ಆಸೆ ಚಿಗುರಿಸಿರುವ ಲೋಕಸತ್ತಾ, ಆಮ್ ಆದ್ಮಿ ಪಕ್ಷ ಸೇರಿದಂತೆ ಸಾಂಪ್ರದಾಯಿಕ ಪಕ್ಷಗಳೆಲ್ಲವೂ ಬೆವರು ಸುರಿಸುತ್ತಿವೆ.
ನಗರದ ಸುತ್ತಲಿನ ಜಿಲ್ಲೆಗಳಲ್ಲಿ ತೆಲಂಗಾಣ ಪರ ಭಾವಸೆಲೆ ಉಕ್ಕಿದರೆ, ನಗರದೊಳಗೆ ವ್ಯಾವಹಾರಿಕ ಲೆಕ್ಕಾಚಾರಗಳೇ ಕಿವಿಗೆ ಬೀಳುತ್ತವೆ. ರಾಜ್ಯ ವಿಭಜನೆಯಿಂದ ತಕ್ಕಡಿ ಎಲ್ಲಿ ‘ಏರುಪೇರು’ ಆಗುವುದೋ ಎಂಬ ಚಿಂತೆ ವಣಿಕ ಸಮುದಾಯವನ್ನು ಕಾಡುತ್ತಿದೆ. ಸೀಮಾಂಧ್ರದಿಂದ ಬಂದು ನೆಲೆಸಿರುವವರಲ್ಲಿ ಒಂದು ರೀತಿಯ ‘ಪರಕೀಯ’ ಭಾವನೆ. ಸ್ಥಳೀಯರಲ್ಲಿ ನಿರೀಕ್ಷೆಗಳ ಉಬ್ಬರ. ನಡುವೆ ಕಲ್ಪಿತ ಶಂಕೆ, ಗುಮಾನಿಗಳೆಲ್ಲ ಗುಂಯ್ಗುಡುತ್ತಿವೆ. ಮೆಟ್ರೊ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಅದನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಂಚಾರ ದಟ್ಟಣೆಯ ಕಿರಿಕಿರಿ ತಪ್ಪಿಸುವ ಕುರಿತು ಯಾರೂ ಮಾತಾಡುತ್ತಿಲ್ಲ. ಬದಲಿಗೆ ಯೋಜನೆಯ ಶ್ರೇಯ ಪಡೆಯಲು ಕಾಂಗ್ರೆಸ್ ಮತ್ತು ತೆಲುಗುದೇಶಂ–ಬಿಜೆಪಿ ಮೈತ್ರಿಕೂಟದ ನಡುವೆ ವಾಕ್ಸಮರ ನಡೆದಿದೆ.
‘ಪಾತಬಸ್ತಿ’ ಎಂದೇ ಹೆಸರಾದ ನಗರದ ಹಳೆಯ ಪ್ರದೇಶದ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಕುಡಿಯುವ ನೀರು ಪೂರೈಕೆ ಪೈಪುಗಳು ನಿಜಾಮರ ಕಾಲದವು. ಸೋರಿಕೆಯಿಂದ ನೀರು ಕಲುಷಿತಗೊಳ್ಳುತ್ತಿದೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಆಗುತ್ತಿವೆ ಎಂದು ಜನರು ದೂರುತ್ತಾರೆ. ನೈರ್ಮಲ್ಯದ ಅಗತ್ಯ ಮನಗಾಣಿಸಲು ಆಂದೋಲನವೇ ಆಗಬೇಕಿದೆ ಎಂಬಂತಿದೆ ಕೆಲವೆಡೆ ಸ್ಥಿತಿ. ಆದರೆ ಇಂತಹ ಸಮಸ್ಯೆಗಳು ಮತ್ತು ನಿವಾರಣೋಪಾಯಗಳು ಚುನಾವಣಾ ವಿಷಯವೇ ಆಗಿಲ್ಲ.
‘ತೆಲಂಗಾಣ ಹೋರಾಟದ ಭಾಗವಾಗಿ ನಡೆದ ಬಂದ್, ಗದ್ದಲಗಳಿಂದಾಗಿ ನಗರದ ‘ಬ್ರ್ಯಾಂಡ್ ಇಮೇಜ್’ಗೆ ಧಕ್ಕೆ ಆಗಿದೆ. ವರ್ಚಸ್ಸು ಹೆಚ್ಚಿಸಿ, ಹೂಡಿಕೆ ಸ್ನೇಹಿ ವಾತಾವರಣ ರೂಪಿಸುವುದು ಆದ್ಯತೆಯ ಕೆಲಸ ಆಗಬೇಕು. ಅದಕ್ಕೆ ರಾಜಕೀಯ ಸ್ಥಿರತೆ ಬೇಕು. ಈಗಿನ ಸ್ಥಿತಿ ನೋಡಿದರೆ ಅತಂತ್ರ ತೀರ್ಪು ಹೊರಬೀಳುವ ಸಾಧ್ಯತೆಯೇ ಹೆಚ್ಚು’ ಎಂಬುದು ಹೋಟೆಲ್ ಉದ್ಯಮಿ ಸುಧೀರ್ಚಂದ್ರ ಅವರ ಅಭಿಪ್ರಾಯ.
ಅತಂತ್ರ ತೀರ್ಪಿನ ಸಾಧ್ಯತೆಯನ್ನು ಹೆಚ್ಚಿಸಿರುವುದು ಹೈದರಾಬಾದ್ ಮಹಾನಗರ ಹಾಗೂ ಹೊರವಲಯದ ಪ್ರದೇಶ. ಇಲ್ಲಿ ಬಹುಮುಖ ಸ್ಪರ್ಧೆ ಇದೆ. ಮುಸ್ಲಿಂ ಸಮುದಾಯದ ಪ್ರಾಬಲ್ಯವಿರುವ ಹೈದರಾಬಾದ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಂತೂ ರಾಜ್ಯ ವಿಭಜನೆ, ಪ್ರಣಾಳಿಕೆ, ಪ್ರಚಾರಗಳ ಪರಿಣಾಮ ಕನಿಷ್ಠ. ಆಲ್ ಇಂಡಿಯಾ ಮಜ್ಲಿಸ್–ಎ– ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷಕ್ಕೆ ಈ ಕ್ಷೇತ್ರ ಭದ್ರಕೋಟೆ ಆಗಿದೆ. ಅದನ್ನು ಭೇದಿಸಲು ಟಿಡಿಪಿ–ಬಿಜೆಪಿ ಮೈತ್ರಿಕೂಟ ‘ನಮೋ’ ಮಂತ್ರ ಜಪಿಸುತ್ತಿದೆ.
ಮಜ್ಲಿಸ್ ಈ ಕ್ಷೇತ್ರದಲ್ಲಿ ಸತತ ಎಂಟು ಬಾರಿ ಗೆಲುವಿನ ಪತಾಕೆ ಹಾರಿಸಿದೆ. ಸಲಾವುದ್ದೀನ್ ಒವೈಸಿ ಆರು ಬಾರಿ ಸಂಸದರಾಗಿದ್ದರು. ಅವರ ಪುತ್ರ ಅಸದುದ್ದೀನ್ ಒವೈಸಿ ಎರಡು ಸಲ ಪ್ರತಿನಿಧಿಸಿದ್ದು, ಪುನರಾಯ್ಕೆ ಬಯಸಿದ್ದಾರೆ. ಡಾ.ಭಗವಂತ ರಾವ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಕಾಂಗ್ರೆಸ್ಸಿನಿಂದ ಸಾಮ ಕೃಷ್ಣಾರೆಡ್ಡಿ ಸ್ಪರ್ಧಿಸಿದ್ದಾರೆ. ನಗರದಲ್ಲಿ ಒಟ್ಟಾರೆಯಾಗಿ ಏಳೆಂಟು ಕ್ಷೇತ್ರಗಳನ್ನು ಮಜ್ಲಿಸ್ ದಕ್ಕಿಸಿಕೊಳ್ಳಲಿದೆ ಎಂಬ ಭಾವನೆ ಜನಸಾಮಾನ್ಯರಲ್ಲೂ ಇದೆ. ಮುಂದಿನ ಸರ್ಕಾರ ರಚನೆಗೆ ಮಜ್ಲಿಸ್ ಸದಸ್ಯರ ಬೆಂಬಲ ಅವಶ್ಯ ಆಗಬಹುದೇನೊ?
ಸಿಕಂದರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಂಡಾರು ದತ್ತಾತ್ರೇಯ, ಕಾಂಗ್ರೆಸ್ಸಿನಿಂದ ಅಂಜನ್ಕುಮಾರ್, ಟಿಆರ್ಎಸ್ನಿಂದ ಟಿ.ಭೀಮಸೇನ್, ಮಜ್ಲಿಸ್ನಿಂದ ಮೋಹನರಾವ್ ಕಣಕ್ಕೆ ಇಳಿದಿದ್ದಾರೆ. ಇಲ್ಲಿ ತ್ರಿಕೋನ ಸ್ಪರ್ಧೆ ಇದೆ. ನರೇಂದ್ರ ಮೋದಿ ಹವಾ, ನಟ ಪವನ್ ಕಲ್ಯಾಣ್ ಪ್ರಚಾರ, ಟಿಡಿಪಿ ಜತೆಗಿನ ಮೈತ್ರಿ ಮೊದಲಾದ ಅಂಶಗಳು ಬಂಡಾರು ಅವರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿವೆ. ಅದು ಎಷ್ಟರಮಟ್ಟಿಗೆ ಮತವಾಗಿ ಪರಿವರ್ತನೆ ಆಗಲಿದೆ ಎಂಬುದರ ಮೇಲೆ ಕ್ಷೇತ್ರದ ಫಲಿತಾಂಶ ನಿಂತಿದೆ.
ಈ ಎರಡೂ ಕ್ಷೇತ್ರಗಳಿಗಿಂತ ಹೆಚ್ಚಿಗೆ ಗಮನ ಸೆಳೆದಿರುವುದು ಮಲ್ಕಾಜಿಗಿರಿ ಲೋಕಸಭಾ ಕ್ಷೇತ್ರ. ದೇಶದಲ್ಲೇ ಅತಿದೊಡ್ಡ ಕ್ಷೇತ್ರ. ಸುಮಾರು 30 ಲಕ್ಷ ಮತದಾರರನ್ನು ಹೊಂದಿದೆ. ಆಂಧ್ರದಲ್ಲಿ ಪರ್ಯಾಯ ರಾಜಕಾರಣವನ್ನು ಮುನ್ನೆಲೆಗೆ ತಂದ, ಲೋಕಸತ್ತಾ ಪಕ್ಷದ ಅಧ್ಯಕ್ಷ ಜಯಪ್ರಕಾಶ್ ನಾರಾಯಣ ಇಲ್ಲಿಂದ ಕಣಕ್ಕೆ ಇಳಿದಿರುವ ಕಾರಣ ಎಲ್ಲರ ದೃಷ್ಟಿ ಇತ್ತ ನೆಟ್ಟಿದೆ. ವಿಧಾನಸಭೆಯಲ್ಲಿ ಅವರು ಪ್ರತಿನಿಧಿಸಿದ್ದ ಕೂಕಟ್ಪಲ್ಲಿ ಕ್ಷೇತ್ರ ಇದರ ವ್ಯಾಪ್ತಿಗೇ ಬರುತ್ತದೆ. ಈ ಸಲ ದೆಹಲಿ ಕಡೆ ನೋಟ ಹರಿಸಿದ್ದಾರೆ. ಪ್ರಜ್ಞಾವಂತ ಮತದಾರರು ಜೆ.ಪಿ. ಕುರಿತು ಸದಭಿಪ್ರಾಯ ಹೊಂದಿದ್ದಾರೆ.
ಕೇಂದ್ರ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಸರ್ವೇ ಸತ್ಯನಾರಾಯಣ ಅವರನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿದೆ. ಹಲವು ಶಿಕ್ಷಣ ಸಂಸ್ಥೆಗಳ ರೂವಾರಿ ಮಲ್ಲಾರೆಡ್ಡಿ ಅವರು ಟಿಡಿಪಿಯಿಂದ, ವೈಎಸ್ಆರ್ ಕಾಂಗ್ರೆಸ್ ಪಕ್ಷದಿಂದ ನಿವೃತ್ತ ಡಿಜಿಪಿ ದಿನೇಶ್ ರೆಡ್ಡಿ ಸ್ಪರ್ಧಿಸಿದ್ದಾರೆ. ಟಿಡಿಪಿ ಟಿಕೆಟ್ ಸಿಗದ ಕಾರಣ ಟಿಆರ್ಎಸ್ಗೆ ಜಿಗಿದ ಮೈನಂಪಲ್ಲಿ ಹನುಮಂತರಾವ್ ಅವರನ್ನೇ ಆ ಪಕ್ಷ ಸ್ಪರ್ಧೆಗೆ ಇಳಿಸಿದೆ. ಸೀಮಾಂಧ್ರ ನಿವಾಸಿಗಳು ಗಣನೀಯ ಸಂಖ್ಯೆಯಲ್ಲಿದ್ದಾರೆ. ಮೇಲ್ನೋಟಕ್ಕೆ ಪಂಚಮುಖಿ ಸ್ಪರ್ಧೆ ಕಾಣುತ್ತದೆ.
ತೆಲಂಗಾಣ ಹೋರಾಟದ ಕೇಂದ್ರ ಬಿಂದು ಹೈದರಾಬಾದ್ ಆದರೂ ಆ ಹೋರಾಟದ ಚಾಲಕಶಕ್ತಿಯಾಗಿದ್ದ ಟಿಆರ್ಎಸ್ಗೆ ನಗರದ ಓಣಿಗಳಲ್ಲಿ ಬೇರಿಳಿಸಲು, ಕ್ಷೇತ್ರ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು ಆಗಿಲ್ಲ. ಇಲ್ಲಿ ಕಣಕ್ಕೆ ಇಳಿದವರಲ್ಲಿ 11 ಮಂದಿ ಹೊಸಬರು. ಇವರೆಲ್ಲ ಚುನಾವಣೆ ವೇಳಾಪಟ್ಟಿ ಪ್ರಕಟವಾದ ಮೇಲೆ ಪಕ್ಷ ಸೇರಿದವರು. ತೆಲಂಗಾಣವಾದದ ಅಲೆಯೇ ಇವರನ್ನು ದಡಕ್ಕೆ ನೂಕಬೇಕು.
ನಗರವಾಸಿಗಳು ಟಿಡಿಪಿ ಆಡಳಿತ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಈಗಲೂ ನೆನೆಯುತ್ತಾರೆ. ಜತೆಗೆ ಬಿಜೆಪಿಯೊಂದಿಗೆ ಮೈತ್ರಿ ಇದೆ. ಈ ಸಮೀಕರಣ ಹೇಗೆ ಒದಗಿಬರಲಿದೆ ಎಂಬುದರ ಕುರಿತು ಜನಸಾಮಾನ್ಯರಲ್ಲೂ ಕುತೂಹಲ ಇದೆ. ಕಾಂಗ್ರೆಸ್ಗೂ ಗಟ್ಟಿ ನೆಲೆ ಇದೆ. ವೈಎಸ್ಆರ್ ಕಾಂಗ್ರೆಸ್ ಕೂಡ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಅಖಾಡವನ್ನು ರಂಗೇರಿಸಿದೆ.
ಪ್ರತಿ ವಿಧಾನಸಭಾ ಕ್ಷೇತ್ರವೂ ಭಿನ್ನವಾಗಿ ಕಾಣುತ್ತದೆ. ಸೋಲು, ಗೆಲುವನ್ನು ನಿರ್ದೇಶಿಸುವ ಅಂಶಗಳೂ ಬೇರೆಯಾಗಿವೆ. ಹತ್ತು ಕ್ಷೇತ್ರಗಳಲ್ಲಿ ಸೀಮಾಂಧ್ರದವರ ಮತಗಳು ಗಣನೀಯ ಎಂಬ ಲೆಕ್ಕಾಚಾರ ನಡೆದಿದೆ. ರಾಜ್ಯ ವಿಭಜನೆಯ ಪರಿಣಾಮವಾಗಿ ಇವರನ್ನು ಪ್ರತ್ಯೇಕವಾಗಿ ಗುರುತಿಸುವ ಪರಿಪಾಠ ಆರಂಭವಾಗಿದೆ. ಮಜ್ಲಿಸ್ ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದ ಕಡೆ ತಕ್ಕಡಿ ಎತ್ತ ಬೇಕಾದರೂ ವಾಲಬಹುದು ಎಂಬ ಅಯೋಮಯ ಸ್ಥಿತಿ ನೆಲೆಸಿದೆ.
ಬಿಜೆಪಿ ತೆಲಂಗಾಣ ಘಟಕದ ಅಧ್ಯಕ್ಷ ಜಿ.ಕಿಷನ್ರೆಡ್ಡಿ, ಕಾಂಗ್ರೆಸ್ಸಿನ ಮರ್ರಿ ಶಶಿಧರ ರೆಡ್ಡಿ, ಜಯಸುಧಾ, ಟಿಡಿಪಿಯ ತಲಸಾನಿ ಶ್ರೀನಿವಾಸ ಯಾದವ್, ಆರ್.ಕೃಷ್ಣಯ್ಯ ಮೊದಲಾದ ಘಟಾನುಘಟಿಗಳು ಕಣದಲ್ಲಿದ್ದಾರೆ. ಮುತ್ತಿನನಗರದ ಜನ ಯಾರಿಗೆ ‘ಬಿರಿಯಾನಿ’ ಉಣಬಡಿಸುವರೊ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.