ಬೆಂಗಳೂರು: ವಿಧಾನಸಭೆಗೆ 2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಚುನಾವಣಾ ಅಕ್ರಮ ಎಸಗಿರುವ ಆರೋಪ ಹೊತ್ತ ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಸೆಷನ್ಸ್ ಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಿ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಧನಂಜಯ ಎನ್ನುವವರು ನೀಡಿದ್ದ ದೂರಿನ ಆಧಾರದ ಮೇಲೆ ರಾಜ್ಯ ಚುನಾವಣಾ ಆಯೋಗ ಯೋಗೇಶ್ವರ್ ವಿರುದ್ಧ ದೂರು ದಾಖಲು ಮಾಡಿಕೊಂಡಿತ್ತು. ಈ ದೂರಿನ ಆಧಾರದ ಮೇಲೆ ತುಮಕೂರು ಜಿಲ್ಲೆಯ ಕುಣಿಗಲ್ನ ಸೆಷನ್ಸ್ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಇದರ ರದ್ದತಿಗೆ ಅವರು ಹೈಕೋರ್ಟ್ ಅನ್ನು ಕೋರಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವಾಗ ಕುಣಿಗಲ್ನ ಕಲ್ಯಾಣ ಮಂಟಪ ಒಂದರಲ್ಲಿ ಬಾಡೂಟ ಹಾಕಿಸಿರುವ ಆರೋಪ ಇವರ ಮೇಲಿದೆ. ಈ ಹಿನ್ನೆಲೆಯಲ್ಲಿ 2011ರ ಮೇ ತಿಂಗಳಿನಲ್ಲಿ ದೋಷಾರೋಪ ಪಟ್ಟಿ ನಿಗದಿ ಮಾಡಲಾಗಿತ್ತು.
`ಘಟನೆ ನಡೆದು ವರ್ಷದ ಒಳಗೆ ದೋಷಾರೋಪ ಪಟ್ಟಿ ನಿಗದಿ ಮಾಡಬೇಕು ಎನ್ನುವುದು ಜನಪ್ರತಿನಿಧಿ ಕಾಯ್ದೆಯಲ್ಲಿ ಉಲ್ಲೇಖವಾಗಿದೆ. ಆದರೆ ಈ ಪ್ರಕರಣದಲ್ಲಿ ಎರಡು ವರ್ಷಗಳ ನಂತರ ದೂರು ದಾಖಲಿಸಲಾಗಿದ್ದು ಇದು ಕಾನೂನು ಉಲ್ಲಂಘನೆ~ ಎಂದು ಯೋಗೇಶ್ವರ್ ದೂರಿದ್ದಾರೆ. ನ್ಯಾಯಮೂರ್ತಿ ಎನ್.ಆನಂದ ವಿಚಾರಣೆ ಮುಂದೂಡಿದರು.