ಕುಶಾಲನಗರ: ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗುವ ಹೊತ್ತಿಗೆ ಸರಿಯಾಗಿ ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ ಪಶ್ಚಿಮ ಘಟದಲ್ಲಿರುವ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿರುವ ಕರಡು ಅಧಿಸೂಚನೆಯನ್ನು ಹೊರಡಿಸಿತು. ಇದರ ಕೊಡಗನ್ನು ತಲುಪಿಲ್ಲವಾದರೂ ಅರ್ಧ ಕೊಡಗು ಪರಿಸರ ಸೂಕ್ಷ್ಮ ಪ್ರದೇಶ ಎಂಬುದು ಹೆಚ್ಚೂ ಕಡಿಮೆ ಎಲ್ಲ ನಾಲಿಗೆಯ ಮೇಲಿರುವ ವಿಚಾರ.
ಪಶ್ಚಿಮಘಟ್ಟವನ್ನು ವಿಶ್ವಪರಂಪರೆಯ ತಾಣವನ್ನಾಗಿ ಘೋಷಿಸಲು ಹೊರಟಾಗ ಅತಿದೊಡ್ಡ ಪ್ರತಿಭಟನೆ ಬಂದದ್ದು ಕೊಡಗಿನಿಂದ. ‘ಪರಿಸರ ಸೂಕ್ಷ್ಮ’, ‘ವಿಶ್ವಪರಂಪರೆ’ ಎಂಬ ಪದಪುಂಜಗಳು ಇಲ್ಲಿ ತಕ್ಷಣದ ಪ್ರತಿಕ್ರಿಯೆಗೆ ಕಾರಣವಾಗುತ್ತವೆ. ಕಾರಣ ಇದರ ಹಿಂದೆ ಇಲ್ಲಿನ ಪ್ಲಾಂಟೇಶನ್ ಲಾಬಿಯಿದೆ. ಹಾಗೆಯೇ ಇಲ್ಲಿ ಬಂಡವಾಳ ಹೂಡಲು ಮುಂದಾಗಿರುವ ‘ಆತಿಥ್ಯೋದ್ಯಮ’ದ ಪ್ರಭಾವವಿದೆ. ಆದರೆ ಹಳ್ಳಿಗರೊಂದಿಗೆ ಮಾತಿಗಿಳಿದರೆ ಸಿಗುವುದು ಬರೀ ಅಂತೆ ಕಂತೆಗಳನ್ನು ಆಧಾರವಾಗಿಟ್ಟುಕೊಂಡ ಭಯಗಳು ಮಾತ್ರ.
ಪಶ್ಚಿಮ ಘಟ್ಟದ ಸುರಕ್ಷತೆಗೆ ಏನು ಮಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಮಾಧವ ಗಾಡ್ಗೀಳ್ ಅವರ ನೇತೃತ್ವದಲ್ಲಿದ್ದ ಪಶ್ಚಿಮ ಘಟ್ಟ ಪರಿಸರ ತಜ್ಞರ ತಂಡದ (ಡಬ್ಲ್ಯುಜಿಇಇಪಿ) ವರದಿಯೊಂದನ್ನು ನೀಡಿತ್ತು. ಪಶ್ಚಿಮಘಟ್ಟ ರಕ್ಷಿಸುವುದಕ್ಕೆ ಸಂಬಂಧಿಸಿದಂತೆ ಹಲವು ಕ್ರಮಗಳನ್ನು ಈ ವರದಿ ಹಲವು ಸಲಹೆಗಳನ್ನು ನೀಡಿತ್ತು. ಆದರೆ ಇದು ಕಠಿಣ ಕ್ರಮಗಳನ್ನು ಪ್ರತಿಪಾದಿಸುತ್ತಿದೆಯೆಂಬ ಒತ್ತಡಕ್ಕೆ ಮಣಿದು ಸರ್ಕಾರ ಕಸ್ತೂರಿರಂಗನ್ ನೇತೃತ್ವದಲ್ಲಿ ಒಂದು ಉನ್ನತ ಮಟ್ಟ ಕಾರ್ಯ ತಂಡ (ಎಚ್ಎಲ್ಡಬ್ಲ್ಯುಜಿ) ರಚಿಸಿತ್ತು. ಈಗ ಕಸ್ತೂರಿರಂಗನ್ ವರದಿಯನ್ನು ಆಧಾರವಾಗಿಟ್ಟುಕೊಂಡು ಕರಡು ಅಧಿಸೂಚನೆಯೊಂದನ್ನು ಕೇಂದ್ರ ಪರಿಸರ ಸಚಿವಾಲಯ ಪ್ರಕಟಿಸಿದೆ.
ಕಸ್ತೂರಿರಂಗನ್ ವರದಿ ಹೇಳುತ್ತಿರುವಂತೆ ಕೊಡಗಿನಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯೊಳಗೆ ಬರುವ ಹಳ್ಳಿಗಳ ಸಂಖ್ಯೆ 55. ಇವುಗಳಲ್ಲಿ 23 ಮಡಿಕೇರಿ ತಾಲೂಕಿನಲ್ಲಿ, 11 ಸೋಮವಾರಪೇಟೆ ತಾಲೂಕಿನಲ್ಲಿ ಮತ್ತು 21 ಹಳ್ಳಿಗಳು ವಿರಾಜಪೇಟೆ ತಾಲೂಕಿನಲ್ಲಿವೆ. ಹಳ್ಳಿಗಳ ಸಂಖ್ಯೆಯನ್ನು ನೋಡಿದರೆ ಇದೊಂದು ಸಣ್ಣ ವಿಚಾರವೆಂಬಂತೆ ಕಾಣಿಸುತ್ತದೆ. ಆದರೆ ತಾಲೂಕಿನ ಒಟ್ಟು ಭೌಗೋಳಿಕ ವ್ಯಾಪ್ತಿಯೊಳಗೆ ಇರುವ ಪರಿಸರ ಸೂಕ್ಷ್ಮ ಪ್ರದೇಶದ ಪ್ರಮಾಣ ಜನಸಾಮಾನ್ಯರಿಗೆ ಹೆದರಿಕೆ ಹುಟ್ಟಿಸಿಬಿಡುತ್ತದೆ.
ಮಡಿಕೇರಿ ತಾಲೂಕಿನ ವಿಸ್ತೀರ್ಣ 1441 ಚದರ ಕಿಲೋಮೀಟರ್. ಇದರಲ್ಲಿ 963 ಚದರ ಕಿಲೋಮೀಟರ್ ಪರಿಸರ ಸೂಕ್ಷ್ಮ ಪ್ರದೇಶ. 1661 ಚದರ ಕಿಲೋಮೀಟರ್ ವಿಸ್ತೀರ್ಣದ ವಿರಾಜಪೇಟೆ ತಾಲೂಕಿನಲ್ಲಿ 926 ಚದರ ಕಿಲೋಮೀಟರ್ ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. ಅತ್ಯಂತ ಕಡಿಮೆ ಪರಿಸರ ಸೂಕ್ಷ್ಮ ಪ್ರದೇಶವಿರುವ ತಾಲೂಕು ಸೋಮವಾರಪೇಟೆ. 1013 ಚದರ ಕಿಲೋಮೀಟರ್ ವಿಸ್ತೀರ್ಣದ ಈ ತಾಲೂಕಿನಲ್ಲಿ ಪರಿಸರ ಸೂಕ್ಷ್ಮವೆಂದು ಗುರುತಿಸಲಾಗಿರುವ ಪ್ರದೇಶದ ವಿಸ್ತೀರ್ಣ 193 ಚದರ ಕಿಲೋಮೀಟರ್ ಮಾತ್ರ. ಈ ಪಟ್ಟಿಯಲ್ಲಿರುವ ಸುಮಾರು 15 ಹಳ್ಳಿಗಳು ಕೇರಳ ಕರ್ನಾಟಕ ಗಡಿಯಲ್ಲಿದ್ದು ಅಲ್ಲಿ ಜನವಸತಿಯೇ ಇಲ್ಲ.
ಪರಿಸರ ಸೂಕ್ಷ್ಮ ಪ್ರದೇಶವೆಂದರೆ ಜನರು ಹೆದರುವುದಕ್ಕೆ ಅನೇಕ ಕಾರಣಗಳಿವೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳು ಸಾಗುವಳಿ ಆಗದೇ ಇರುವ ಬಾಣೆ ಜಮೀನನ್ನು ಅರಣ್ಯವೋ ಸರ್ಕಾರಿ ಜಮೀನೋ ಮಾಡಿಬಿಡುತ್ತದೆಯೆಂಬ ಭಯ ಹಳೆಯದ್ದು. ಇತ್ತೀಚೆಗೆ ಪಶ್ಚಿಮ ಘಟ್ಟವನ್ನು ವಿಶ್ವಪರಂಪರೆಯ ಪಟ್ಟಿಗೆ ಸೇರಿಸುವ ಪ್ರಸ್ತಾಪಕ್ಕೆ ಎದುರಾದ ವಿರೋಧದ ಹಿಂದೆಯೂ ಇಂಥದ್ದೇ ಭಯವಿತ್ತು. ಈಗ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಇದೇ ಭಯವಿದೆ.
ಗ್ರಾಮೀಣ ಪ್ರದೇಶದಲ್ಲಿ ವಿಶ್ವಪರಂಪರೆಯ ತಾಣ, ಕಸ್ತೂರಿ ರಂಗನ್ ವರದಿಯ ಶಿಫಾರಸುಗಳ ಮಧ್ಯೆ ಯಾವುದೇ ವ್ಯತ್ಯಾಸವನ್ನು ಯಾರೂ ಗುರುತಿಸುವುದಿಲ್ಲ. ಹೇರೂರಿನ ಕೃಷಿಕ ಪ್ರಕಾಶ್ ಅವರ ಮಾತುಗಳೇ ಇದಕ್ಕೆ ಸಾಕ್ಷಿ ‘ನಾವು ಮನೆ ಕಟ್ಟಬಾರದಂತೆ, ತೋಟದಲ್ಲಿ ಏನಾದರೂ ಮಾಡುವುದಕ್ಕೆ ಫಾರೆಸ್ಟ್ ಡಿಪಾರ್ಟಮೆಂಟ್ನಿಂದ ಪರ್ಮಿಟ್ ಪಡೆಯಬೇಕಂತೆ...’ ಹೀಗೆ ಅಂತೆ ಕಂತೆಗಳಲ್ಲಿಯೇ ಸಾಗುವ ಅವರು ತಮ್ಮ ಮಾತುಗಳಿಗೆ ಸಾಕ್ಷ್ಯ ಒದಗಿಸುವುದು ‘ಇದೆಲ್ಲಾ ಪೇಪರಲ್ಲಿ ಬಂದಿತ್ತಂತೆ’ ಎಂಬ ಮತ್ತೊಂದು ಮಾಹಿತಿಯ ಮೂಲಕ.
ಕಸ್ತೂರಿ ರಂಗನ್ ವರದಿಯ ಶಿಫಾರಸುಗಳನ್ನು ಅಧ್ಯಯನ ಮಾಡಿರುವ ಮಡಿಕೇರಿಯ ನಿವೃತ್ತ ತಹಶೀಲ್ದಾರ್ ಟಿ.ಸಿ.ತಮ್ಮಯ್ಯ ‘ಇದರಿಂದ ಸಾಮಾನ್ಯ ಕೃಷಿಕರಿಗೇನೂ ತೊಂದರೆಯಾಗುವುದಿಲ್ಲ. 20,000 ಚದರ ಮೀಟರಿಗಿಂದ ದೊಡ್ಡ ಕಟ್ಟಡಗಳನ್ನು ಕಟ್ಟಬೇಕಿದ್ದರೆ ಅದಕ್ಕೆ ಪರಿಸರ ಪರಿಣಾಮ ವರದಿ ಬೇಕಾಗುತ್ತದೆ. ಅಂದರೆ ಇದರಿಂದ ದೊಡ್ಡ ತೊಂದರೆಯಾಗುವುದು ರೆಸಾರ್ಟ್ಗಳನ್ನು ಮಾಡುವವರಿಗೆ.’
ಸದ್ಯ ಕಸ್ತೂರಿರಂಗನ್ ವರದಿಯ ಕುರಿತಂತೆ ಇರುವ ಎಲ್ಲಾ ಊಹಾಪೋಹಗಳೂ ಕಟ್ಟಡ ನಿರ್ಮಾಣದ ಸುತ್ತಲೇ ತಿರುಗುತ್ತಿರುವುದರಿಂದ ಇದರ ಹಿಂದೆ ರೆಸಾರ್ಟ್ ಲಾಬಿ ಸಕ್ರಿಯವಾಗಿರುವುದನ್ನು ಸೂಚಿಸುತ್ತಿದೆ.
ಜನರ ಮಧ್ಯೆ ಈ ಪ್ರಸ್ತಾಪಗಳೆಲ್ಲವೂ ಬಗೆಬಗೆಯಲ್ಲಿ ಚರ್ಚೆಯಾಗುತ್ತಿದ್ದರೂ ಇದಕ್ಕೆ ರಾಜಕೀಯ ಪ್ರತಿಕ್ರಿಯೆಯೆಂಬುದು ಬಹಳ ಕಡಿಮೆ. ಸುಮಾರು ಜಿಲ್ಲೆಯ ಅರ್ಧಭಾಗದ ಮೇಲೆ ಪರಿಣಾಮ ಬೀರುವ ಕಸ್ತೂರಿರಂಗನ್ ವರದಿಯ ಶಿಫಾರಸುಗಳ ಕುರಿತಂತೆ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ. ಪಶ್ಚಿಮಘಟ್ಟವನ್ನು ವಿಶ್ವಪರಂಪರೆಯ ಪಟ್ಟಿಗೆ ಸೇರಿಸುವುದನ್ನೇ ವಿರೋಧಿಸಿದ್ದ ಬಿಜೆಪಿ ಇದಕ್ಕೂ ತನ್ನ ವಿರೋಧವನನ್ನು ಸೂಚಿಸುತ್ತಿದೆಯೆಂದು ಭಾವಿಸಬಹುದಷ್ಟೇ.
ಪರಿಸರ ಸಂರಕ್ಷಕರು, ಪ್ರವಾಸೋದ್ಯಮದ ಲಾಬಿಗಳ ನಡುವೆಯಷ್ಟೇ ಗಂಭೀರ ಚರ್ಚೆಯಲ್ಲಿರುವ ಕಸ್ತೂರಿ ರಂಗನ್ ವರದಿಯ ಶಿಫಾರಸುಗಳು ಜನಸಾಮಾನ್ಯರಿಗಿನ್ನೂ ಒಗಟು. ಇದರಿಂದಾಗಿ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಣದಲ್ಲಿರುವ ಎಲ್ಲಾ ಪ್ರಮುಖ ಅಭ್ಯರ್ಥಿಗಳಿಗೂ ತಮ್ಮ ಪಕ್ಷಗಳ ರಾಷ್ಟ್ರೀಯ ಕಾರ್ಯಸೂಚಿಗಳನ್ನೇ ಮುಂದಿಟ್ಟು ಮತಯಾಚಿಸಲು ಸಾಧ್ಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.