ಕುಷ್ಟಗಿ: ಅಧಿಕೃತ ಪರವಾನಿಗೆ ಪಡೆಯದಿದ್ದರೂ ಪಕ್ಷದ ಬಾವುಟಗಳನ್ನು ಕಟ್ಟಿಕೊಂಡು ತಿರುಗಾಡುತ್ತ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಬಿಎಸ್ಆರ್ ಕಾಂಗ್ರೆಸ್ನ ಎರಡು ಮತ್ತು ಜೆಡಿಎಸ್ನ ಒಂದು ವಾಹನಗಳನ್ನು ಚುನಾವಣಾ ವಿಚಕ್ಷಣಾ ದಳದ ಅಧಿಕಾರಿಗಳು ಬುಧವಾರ ಇಲ್ಲಿ ವಶಪಡಿಸಿಕೊಂಡರು.
ಆದರೆ ವಾಹನವನ್ನು ಠಾಣೆಗೆ ತರುವಂತೆ ಸೂಚಿಸಿದ ವಿಚಕ್ಷಣಾ ದಳದ ಅಧಿಕಾರಿ ಮಾರುತಿ ಗೋಖಲೆ ಮತ್ತು ಪೊಲೀಸರೊಂದಿಗೆ ಪಾಮಮತ್ತ ಕೆಲ ಜೆಡಿಎಸ್ ಕಾರ್ಯಕರ್ತರು ವಾಗ್ವಾದಕ್ಕಿಳಿದಿದ್ದು ಕಂಡುಬಂದಿತು.
ಅಧಿಕಾರಿ ಪರಿಶೀಲನೆ ನಡೆಸಿದಾಗ ಪರವಾನಿಗೆ ಪತ್ರ ಇರಲಿಲ್ಲ. ಹಾಗಾಗಿ ಅದನ್ನು ಠಾಣೆಗೆ ತೆಗೆದುಕೊಂಡು ನಡೆಯಿರಿ ಎಂದಾಗ ಅವರೊಂದಿಗೆ ಜಗಳಕ್ಕಿಳಿದರು.
ನಂತರ ಪೊಲೀಸರಿಗೆ ಮಾಹಿತಿ ನೀಡಿದ ಗೋಖಲೆ, ವಾಹನವನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿದರು.
ಆಗ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿತ್ತು. ಅಲ್ಲದೇ ಜೆಡಿಎಸ್ನ ಪ್ರಮುಖರು ಮನವಿ ಪುರಸ್ಕರಿಸದೇ ನಿಯಮಾನುಸಾರ ಕ್ರಮ ಜರುಗಿಸುವುದಾಗಿ ಹೇಳಿದರು. ನಂತರ ವಾಹನವನ್ನು ಠಾಣೆಗೆ ತೆಗೆದುಕೊಂಡು ಹೋಗಿ ಪ್ರಕರಣ ದಾಖಲಿಸಲಾಗಿದೆ.
ನೆರೆಬೆಂಚಿ ಸೀಮಾಂತರದಲ್ಲಿನ ಲೋಕೋಪಯೋಗಿ ಇಲಾಖೆ ಸರ್ಕ್ಯೂಟ್ಹೌಸ್ ಬಳಿ ಅಕ್ರಮವಾಗಿ ಕೊಳವೆಬಾವಿ ತೋಡುತ್ತಿದ್ದು ಜಿಲ್ಲಾಧಿಕಾರಿ ತುಳಸಿಮದ್ದಿನೇನಿ ಅವರ ಗಮನಕ್ಕೆ ಬಂದಿತು. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ವಾಹನ ವಶಪಡಿಸಿಕೊಂಡ ವಿಚಕ್ಷಣಾದಳದವರು ಅದನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದು ಸಮರ್ಪಕ ದಾಖಲೆ ನೀಡಿ ವಾಹನ ತೆಗೆದುಕೊಂಡು ಹೋಗುವಂತೆ ಮಾಲೀಕರಿಗೆ ಸೂಚಿಸಿದ್ದಾರೆ.