ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದವರಿಗೆ ಈ ಬಾರಿ ಎಡಗೈನ ತೋರುಬೆರಳು ಬದಲಿಗೆ, ಉಂಗುರ ಬೆರಳಿಗೆ ಶಾಯಿ (ಮಸಿ) ಹಾಕಲು ನಿರ್ಧರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ರಾಜ್ಯದಲ್ಲಿನ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ಮಾರ್ಚ್ 7ರಂದು ನಡೆದ ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ಎಡಗೈನ ತೋರುಬೆರಳಿಗೆ ಶಾಯಿ ಹಾಕಲಾಗಿತ್ತು. ಅದು ಇನ್ನೂ ಮಾಸದ ಕಾರಣ, ಈ ಬಾರಿ ಉಂಗುರಬೆರಳಿಗೆ ಶಾಯಿ ಹಾಕಲು ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ ಎಂದು ರಾಜ್ಯದ ಜಂಟಿ ಚುನಾವಣಾಧಿಕಾರಿ ಟಿ.ಶಾಮಯ್ಯ `ಪ್ರಜಾವಾಣಿ'ಗೆ ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಗೈ ತೋರುಬೆರಳಿಗೆ ಹಾಕಿರುವ ಶಾಯಿ ಅಳಿಸದೆ ಇರುವುದರಿಂದ, ಗೊಂದಲಕ್ಕೆ ಅವಕಾಶ ಆಗಬಾರದು ಎಂಬ ಉದ್ದೇಶದಿಂದ ವಿಧಾನಸಭಾ ಚುನಾವಣೆಗೆ ಈ ಬದಲಾವಣೆ ಮಾಡಲಾಗಿದೆ. ಆಯೋಗದ ತೀರ್ಮಾನವನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.