ನವದೆಹಲಿ (ಪಿಟಿಐ): ಮಾವೋವಾದಿಗಳು ಪಶ್ಚಿಮ ಬಂಗಾಳದ ಜಂಗಲ್ಮಹಲ್ ಪ್ರದೇಶದಲ್ಲಿ ಹೊಸ ಗೆರಿಲ್ಲಾ ನೆಲೆಗಳನ್ನು ಸ್ಥಾಪಿಸುವ ವಿಚಾರ ತಿಳಿದು ಬಂದಿರುವುದಾಗಿ ಕೇಂದ್ರ ಗೃಹಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ.
ಗುರುವಾರ ಇಲ್ಲಿ ನಡೆದ ಎಲ್ಲಾ ರಾಜ್ಯಗಳ ಪೊಲೀಸ್ ವರಿಷ್ಠಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂಸಾಪೀಡಿತ ಛತ್ತೀಸ್ಗಡ, ಜಾರ್ಖಂಡ್, ಬಿಹಾರ ಮತ್ತು ಒಡಿಶಾ ರಾಜ್ಯಗಳಲ್ಲಿ ನಕ್ಸಲರ ಅಟ್ಟಹಾಸವನ್ನು ಪೂರ್ಣ ಪ್ರಮಾಣದಲ್ಲಿ ಅಡಗಿಸಲು ಇನ್ನೂ ಸಾಧ್ಯವಾಗಿಲ್ಲ. ಎಡಪಂಥೀಯ ಉಗ್ರಗಾಮಿಗಳು ದೇಶದಲ್ಲಿ ನಡೆಸುತ್ತಿರುವ ಚಳವಳಿ ತೀವ್ರ ಹಿಂಸಾರೂಪದ್ದಾಗಿದ್ದು, ಸಿಪಿಐ ಮಾವೋವಾದಿ ಸಂಘಟನೆಯು ಅತಿ ದೊಡ್ಡ ಹಿಂಸಾ ಸ್ವರೂಪದ ಸಂಘಟನೆಯಾಗಿದೆ ಎಂದಿದ್ದಾರೆ.
`ಸಿಪಿಐ ಮಾವೋವಾದಿಗಳು ಕನಿಷ್ಠ ನಾಲ್ಕು ಗೆರಿಲ್ಲಾ ಸೇನೆ ಹೊಂದಿದ್ದು, ಶಸ್ತ್ರಾಸ್ತ್ರ ಬಲದ ಹೋರಾಟದಿಂದ ಉದ್ದೇಶಿತ ಗುರಿ ಸಾಧಿಸಲು ಹವಣಿಸುತ್ತಿವೆ~ ಎಂದು ತಿಳಿಸಿದ್ದಾರೆ. ಎಡಪಂಥೀಯ ಉಗ್ರಗಾಮಿಗಳನ್ನು ಮಟ್ಟಹಾಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜವಾಬ್ದಾರಿಯುತವಾಗಿ ನಡೆದುಕೊಂಡಿವೆ ಎಂದು ಇದೇ ವೇಳೆ ಹೇಳಿದರು.
`ಮಾವೋವಾದಿಗಳ ಹಿಂಸಾ ಚಟುವಟಿಕೆಗಳ ಸಂಖ್ಯೆ ತಗ್ಗಿದ್ದು, ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಬದಲಾಗುತ್ತಿದೆ~ ಎಂಬುದಕ್ಕೆ ಇದು ಸಾಕ್ಷಿ ಎಂದರು. ಎಡಪಂಥೀಯ ಉಗ್ರಗಾಮಿಗಳನ್ನು ಬಗ್ಗು ಬಡಿಯಲು ಕಡಿಮೆ ಮತ್ತು ಮಧ್ಯಮ ಅವಧಿಯ ತಂತ್ರಗಳನ್ನು ರೂಪಿಸಬೇಕು ಎಂದು ಡಿಐಜಿಗಳಿಗೆ ಸಲಹೆ ಮಾಡಿದರು.