ಚಿಕ್ಕಬಳ್ಳಾಪುರ: ಸಮಾಜದ ಏಳಿಗೆ ಮತ್ತು ಜನರ ಕಲ್ಯಾಣಕ್ಕೆ ಶ್ರಮಿಸಿದ ಬಾಬು ಜಗಜೀವನರಾಮ್ ಅವರನ್ನು ಸದಾ ಸ್ಮರಿಸಬೇಕು. ಅವರ ತತ್ವ ಮತ್ತು ಸಿದ್ಧಾಂತವನ್ನು ಪಾಲಿಸಲು ಪ್ರತಿಯೊಬ್ಬರು ಆಸಕ್ತಿ ತೋರಬೇಕು ಎಂದು ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ ತಿಳಿಸಿದರು.
ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಮ್ ಅವರ 104ನೇ ಜನ್ಮದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಬಾಬು ಜಗಜೀವನರಾಮ್ ಅವರು ಉಪಪ್ರಧಾನಿ ಮತ್ತು ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದರು. ಬಡವರ ಮತ್ತು ನಿರ್ಗತಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು’ ಎಂದು ಸ್ಮರಿಸಿದರು.
‘ಯುವಜನರಿಗೆ ಮಾರ್ಗದರ್ಶಿ ಮತ್ತು ಸ್ಫೂರ್ತಿಯಾಗಿದ್ದ ಅವರು, ದೇಶದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಹಲವು ರೀತಿಯ ಸಂಕಷ್ಟ, ಸಮಸ್ಯೆಗಳು ಎದುರಾದರೂ ಸ್ವಾತಂತ್ರ್ಯ ಹೋರಾಟದಿಂದ ವಿಮುಖರಾಗಲಿಲ್ಲ. ದೇಶವನ್ನು ಬ್ರಿಟೀಷ್ ಆಳ್ವಿಕೆಯಿಂದ ಮುಕ್ತಗೊಳಿಸುವವರೆಗೆ ಹೋರಾಡಿದರು’ ಎಂದು ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಟಿ.ಡಿ.ಪವಾರ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ವೆಂಕಟನಾರಾಯಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಡಿ.ಅವುಲಪ್ಪ ಇತರರು ಉಪಸ್ಥಿತರಿದ್ದರು.