ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗನ್ ಜಾಮೀನು ಅರ್ಜಿ ವಜಾ

Last Updated 5 ಅಕ್ಟೋಬರ್ 2012, 8:15 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರು ಸಲ್ಲಿಸಿದ್ದ ಜಾಮೀನು ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ಜಗನ್ ಸಲ್ಲಿಸಿದ್ದ ಜಾಮೀನು ಮನವಿ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಅಫ್ತಾಬ್ ಅಲಂ ಅವರನ್ನೊಳಗೊಂಡ ನ್ಯಾಯಾಪೀಠವು ಅರ್ಜಿಯನ್ನು ವಜಾ ಮಾಡುವುದರೊಂದಿಗೆ  `ನೀವು ಸ್ಪಲ್ಪ ಕಾಯಬೇಕಾಗುತ್ತದೆ~ ಎಂದು ಹೇಳಿತು.

`ಜಗನ್ ಅವರು ಗಂಭೀರ ಸ್ವರೂಪದ ಆರ್ಥಿಕ ಆರೋಪಕ್ಕೆ ಗುರಿಯಾಗಿದ್ದು, ಅವರಿಗೆ ಜಾಮೀನು ನೀಡಬಾರದು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಮೋಹನ್ ಪರಸರನ್ ಅವರು ನ್ಯಾಯಾಪೀಠಕ್ಕೆ ಮನವಿ ಮಾಡಿಕೊಂಡಿದ್ದರು, ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳು ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

ಅಲ್ಲದೇ ಜಗನ್ ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಾರಿಷಿಯಸ್ ಮತ್ತು ಲಕ್ಸಂಬರ್ಗ ಸೇರಿದಂತೆ ವಿದೇಶಗಳಲ್ಲಿರುವ ಅಕ್ರಮ ಆಸ್ತಿಯ ಜಾಡನ್ನು ಹಿಡಿದ್ದಿದ್ದು, ಆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂಬ ವಿಷಯವನ್ನು ಇದೇ ಸಂದರ್ಭದಲ್ಲಿ ಪರಸರನ್ ಅವರು ನ್ಯಾಯಾಪೀಠದ ಗಮನಕ್ಕೆ ತಂದರು.

`ಆಂಧ್ರಪ್ರದೇಶದ ಉಪ ಚುನಾವಣೆಯ ಸಂದರ್ಭದಲ್ಲಿಯೂ ನಮ್ಮ ಕಕ್ಷಿದಾರರು ತನಿಖಾ ಸಂಸ್ಥೆಗೆ ಸಹಕರಿಸುತ್ತಿದ್ದರೂ ಅವರನ್ನು ಬಂಧಿಸಲಾಗಿದೆ. ಅವರಿಗೆ ಜಾಮೀನು ನೀಡಬೇಕು ಎಂದು ಜಗನ್ ಪರ ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯನ್ ಅವರು ನ್ಯಾಯಾಪೀಠದ ಮುಂದೆ ಮನವಿ ಮಾಡಿಕೊಂಡಿದ್ದರು.

ಜಾರಿ ನಿರ್ದೇಶನಾಲಯವು ಗುರುವಾರಷ್ಟೇ ಕಡಪ ಸಂಸದ ಜಗನ್  ಮತ್ತು ಅವರ ಅಪ್ತರಿಗೆ ಸೇರಿದ ಸುಮಾರು 51 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲು ಆದೇಶ ಹೊರಡಿಸಿತ್ತು. ಇದರ ಬೆನ್ನ ಹಿಂದೆಯೇ ಸುಪ್ರೀಂ ಕೋರ್ಟ್ ಜಗನ್ ಅವರು ಸಲ್ಲಿಸಿದ್ದ ಜಾಮೀನು ಮನವಿ ಅರ್ಜಿಯನ್ನು ತಿರಸ್ಕರಿಸಿರುವುದು ಜಗನ್ ಅವರಿಗೆ ನುಂಗಲಾರದ ತುತ್ತಾಗಿದೆ.

ಸದ್ಯ ಜಗನ್ ಅವರು ಹೈದರಾಬಾದ್ ನ ಚಂಚಲಗುಡ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT