ಔರಾದ್: ಜಾನುವಾರುಗಳ ಹಬ್ಬ ಎಂದು ಕರೆಯಲಾಗುವ `ಹೋಳ ಹಬ್ಬ'ವನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.
ರೈತರ ದೊಡ್ಡ ಹಬ್ಬ ಎಂದೇ ಬಿಂಬಿತವಾಗಿರುವ ಈ ಹಬ್ಬದ ದಿನ ರೈತರ ಮನೆಯಲ್ಲಿ ಋಷಿ ಮನೆ ಮಾಡಿರುತ್ತದೆ. ಬದುಕಿಗೆ ಆಸರೆಯಾದ ಆಕಳು, ಎತ್ತು, ಹೋರಿಗಳಿಗೆ ಸ್ನಾನ ಮಾಡಿಸಿ ವೈವಿಧ್ಯಮಯ ಬಣ್ಣ ಬಳಿದು ಸಿಂಗರಿಸುತ್ತಾರೆ. ಹೋಳಿಗೆ ನೈವೇದ್ಯ ಮಾಡಿ, ಹೋಳಿಯನ್ನು ಜಾನುವಾರು ಗಳಿಗೆ ತಿನ್ನಿಸಿ, ತಾವು ಸವಿದು ಸಂಭ್ರಮಿಸುತ್ತಾರೆ.
ಸಂಜೆ ಎಲ್ಲ ರೈತರು ತಮ್ಮ ಜಾನುವಾರುಗಳನ್ನು ಅಮರೇಶ್ವರ ದೇಗುಲದ ಆವರಣದಲ್ಲಿ ತಂದು ನಿಲ್ಲಿಸುತ್ತಾರೆ. ದೇವಸ್ಥಾನ ಸಮಿತಿ ಯವರು ಅತ್ಯುತ್ತಮವಾಗಿ ಅಲಂಕೃತ ಗೊಂಡ ಎರಡು ಜೋಡಿ ಎತ್ತುಗಳು ಆಯ್ಕೆ ಮಾಡಿ ಬಹುಮಾನ ನೀಡುತ್ತಾರೆ. ಗುರುವಾರ ನಡೆದ ಪ್ರದರ್ಶನದಲ್ಲಿ ಕಲ್ಲಪ್ಪ ದೇಶಮುಖ ಅವರ ಜೋಡಿ ಎತ್ತುಗಳಿಗೆ ಪ್ರಥಮ ಮತ್ತು ಬಂಡೆಪ್ಪ ಕಂಟೆ ಅವರ ಹೋರಿಗೆ ದ್ವಿತೀಯ ಬಹುಮಾನ ಸಂದಿತು.
ಪಟ್ಟಣ ಪಂಚಾಯಿತಿ ಸದಸ್ಯ ಕುಮಾರ ದೇಶಮುಖ, ಬಸವರಾಜ ದೇಶಮುಖ, ಕಲ್ಲಪ್ಪ ದೇಶಮುಖ, ಶಿವರಾಜ ಅಲ್ಮಾಜೆ, ಶೇಷರಾವ ಕೊಳಿ ಸೇರಿದಂತೆ ಪಟ್ಟಣದ ಗಣ್ಯರು ಇದ್ದರು.
ಮೆರವಣಿಗೆ: ಅಮರೇಶ್ವರ ದೇವಸ್ಥಾನ ಎದುರು ಸಾಲಾಗಿ ನಿಂತ ಜಾನುವಾರು ಗಳು ಒಂದೊಂದಾಗಿ ಹನುಮಾನ ದೇವಸ್ಥಾನಕ್ಕೆ ಸುತ್ತ ಹಾಕಿಸಲಾಯಿತು. ಅಲಂಕೃತ ಜಾನುವಾರುಗಳ ಮೆರವಣಿಗೆ ಮಕ್ಕಳು, ಮಹಿಳೆಯರು ಖುಷಿ ನೀಡಿತು. ದೇವಸ್ಥಾನದ ಅಕ್ಕಪಕ್ಕದ ಕಟ್ಟಡ ಮೇಲೆ ನಿಂತು ಮೆರವಣಿಗೆ ನೋಡಿ ಜನ ಸಂಭ್ರಮಿಸುತ್ತಾರೆ.