ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಒತ್ತಡದಿಂದ ಮರಣದಂಡನೆ: ಅಕ್ಷಯ್‌ ತಂದೆ

Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಪಟ್ನಾ (ಐಎಎನ್‌ಎಸ್‌, ಪಿಟಿಐ): ದೇಶ­ದಾ­ದ್ಯಂತ ಜನರಿಂದ ಬಂದ ತೀವ್ರ ಒತ್ತಡ­ದಿಂದಾಗಿ ನಾಲ್ವರಿಗೆ ಮರಣ ದಂಡನೆ ವಿಧಿಸಲಾಗಿದೆ ಎಂದು ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಕ್ಷಯ್‌ ಠಾಕೂರ್‌ನ ತಂದೆ ಹೇಳಿದ್ದಾರೆ.

ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದೂ ಹೇಳಿದ್ದಾರೆ.
‘ದೇಶದ ಎಲ್ಲಾ ಕಡೆಗಳಿಂದ ಭಾರಿ ಒತ್ತಡ ಇದ್ದುದರಿಂದ ಈ ತೀರ್ಪು ನಿರೀಕ್ಷಿತ. ಆದರೆ ನಾವು ಇದಕ್ಕೆ ವಿರುದ್ಧ ವಾಗಿ ವಿಶ್ವಾಸ ಹೊಂದಿದ್ದೆವು’ ಎಂದು ಅಕ್ಷಯ್‌ ತಂದೆ ಸರ್ಯು ಸಿಂಗ್‌ ಹೇಳಿದರು.

‘ಆ ದೇವರು ಕೂಡ ನಮ್ಮ ಕೈಬಿಟ್ಟ. ಹಾಗಾಗಿ ಮಗ ಇಷ್ಟು ದೊಡ್ಡ ಶಿಕ್ಷೆಗೆ ಗುರಿಯಾಗಿದ್ದಾನೆ’ ಎಂದು ವೃತ್ತಿಯಲ್ಲಿ ಕೃಷಿಕರಾಗಿರುವ ಲಹಾಂಗ್‌ ಕಮಾರ್ ಗ್ರಾಮದ 60 ವರ್ಷದ ಸಿಂಗ್‌  ದೂರವಾಣಿಯಲ್ಲಿ ತಿಳಿಸಿದರು.

ಅಕ್ಷಯ್‌ ಸೇರಿದಂತೆ ನಾಲ್ವರಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದ ಸುದ್ದಿ  ಟಿವಿಯಲ್ಲಿ ನೋಡುತ್ತಿದ್ದಂತೆ, ಅಕ್ಷಯ್‌ನ ತಾಯಿ ಮಾಲತಿ ದೇವಿ, ಪತ್ನಿ ಪುನಿತಾದೇವಿ ದುಃಖ ಕಟ್ಟೆ ಒಡೆಯಿತು. ಪುನಿತಾ ದೇವಿಯ ಕಾಲಿನಲ್ಲಿ ಕುಳಿತ್ತಿದ್ದ ಅಕ್ಷಯ್‌ನ ಎರಡು ವರ್ಷದ ಪುತ್ರನಿಗೆ ನಡೆದ ಸಂಗತಿಗಳ ಬಗ್ಗೆ ಅರಿವೇ ಇರಲಿಲ್ಲ.

‘ನಮಗೆಲ್ಲರಿಗೂ ಇದು ಅತ್ಯಂತ ದುಃಖದ ಸುದ್ದಿ. ತಾಯಿ ಹಾಗೂ ನಾದಿನಿ  ಟಿವಿಯಲ್ಲೂ ಸುದ್ದಿ ಬಿತ್ತರ ಗೊಂಡ ಬಳಿಕ ನಿರಂತರವಾಗಿ ಅಳುತ್ತಲೇ ಇದ್ದಾರೆ. ಅವರು ಮೂರು ಬಾರಿ ಕುಸಿದು ಬಿದ್ದಿದ್ದಾರೆ’ ಎಂದು ಅಕ್ಷಯ್‌ನ ಸಹೋದರ ಅಭಯ್‌ ಸಿಂಗ್‌ ಹೇಳಿದರು.

‘ಸ್ವಲ್ಪ ನೆಮ್ಮದಿಯಾದರೂ ಸಿಗ­ಬಹುದು ಎಂದುಕೊಂಡಿದ್ದೆವು. ಆದರೆ ನ್ಯಾಯಾಲಯವು ಅಕ್ಷಯ್‌ನ ಹಣೆ­ಬರಹ ಬರೆದಿರುವುದರಿಂದ ನಮ್ಮ ವಿಶ್ವಾಸಕ್ಕೆ ಅರ್ಥವಿಲ್ಲದಂತಾಗಿದೆ’ ಎಂದು ಅಭಯ್‌ ಸಿಂಗ್‌ ಹೇಳಿದರು.

ಶಿಕ್ಷೆ ಪ್ರಕಟಗೊಂಡ ನಂತರ ಅಕ್ಷಯ್ ಕುಟುಂಬದಲ್ಲಿನ ವಾತಾವರಣ  ತಿಳಿದು ಕೊಳ್ಳುವುದಕ್ಕಾಗಿ ಹತ್ತಾರು ಸ್ಥಳೀಯ ಪತ್ರಕರ್ತರು ಹಾಗೂ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು ಅಕ್ಷಯ್‌ ಠಾಕೂರ್‌ ಮನೆಮುಂದೆ ಜಮಾಯಿ ಸಿದ್ದರು.

ಅಪರಾಧಿಗಳಿಗೆ ಬಿಳಿ ಕುರ್ತಾ, ಪೈಜಾಮ
ನವದೆಹಲಿ (ಐಎಎನ್‌ಎಸ್‌): ಪ್ರಕರ ಣದಲ್ಲಿ ಅಪರಾಧಿಗಳಾಗಿರುವ ನಾಲ್ವರು ತೀರ್ಪು ಪ್ರಕಟಗೊಂಡ ಬಳಿಕ ಬಿಳಿ ಕುರ್ತಾ, ಪೈಜಾಮ ಧರಿಸಿ ಜೈಲಿಗೆ ಮರಳಿದರು.  ಈ ದಿರಿಸು ಅವರು ಇನ್ನು ವಿಚಾರಣಾಧೀನ ಕೈದಿಗಳಲ್ಲ ಎಂಬುದನ್ನು ಬಿಂಬಿಸುತ್ತದೆ. ‘ಈ ಮೊದಲಿದ್ದ ಕೊಠಡಿಗಳಲ್ಲೇ ಅವರನ್ನು ಇರಿಸಲಾಗುವುದು. ನಂತರದಲ್ಲಿ ಅಗತ್ಯ ವಾದರೆ ಬೇರೆ ಜೈಲುಗಳಿಗೆ ಕಳುಹಿಸ ಲಾಗುವುದು’ ಎಂದು ತಿಹಾರ ಜೈಲಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಾಧ್ಯಮದವರ ವಿರುದ್ಧ ಆಕ್ರೋಶ!
ನವದೆಹಲಿ (ಐಎಎನ್‌ಎಸ್‌): ‘ನಿಮಗೆ ಈಗ ಸಂತೋಷ ವಾಗಿದೆಯೇ? ನಮ್ಮನ್ನು ಏಕಾಂತದಲ್ಲಿರಲು ಬಿಡಿ, ಸದ್ಯದಲ್ಲಿಯೇ ನನ್ನ ಮಗ ಸಾಯುತ್ತಾನೆ...!’

ಇದು ಕೋರ್ಟ್ ತೀರ್ಪು ಪ್ರಕಟ­ವಾದ ನಂತರ ಆಘಾತ ಕ್ಕೊಳಗಾಗಿ ಕುಸಿದುಬಿದ್ದ ವಿನಯ್‌ ಶರ್ಮನ ತಾಯಿ ಪರ್ತಕರ್ತರ ಮುಂದಿಟ್ಟ ಆವೇಶದ ಪ್ರಶ್ನೆ. 

ಮತ್ತೊಬ್ಬ ಅಪರಾಧಿ ಪವನ್‌ ಗುಪ್ತಾ ಅವರ ತಂದೆ ಹೀರಾ ಲಾಲ್‌ ಅವರು, ಮಾಧ್ಯಮಗಳ ಒತ್ತಡದಿಂದಲೇ ನನ್ನ ಮಗನ ವಿರುದ್ಧ ತೀರ್ಪು ನೀಡಲಾಗಿದೆ ಎಂದು  ಆರೋಪಿಸಿದ್ದಾರೆ. ‘ನನ್ನ ಮಗ ಮುಗ್ಧ. ಆತನ ವಿರುದ್ಧ ಯಾವುದೇ ಸಾಕ್ಷ್ಯ ಗಳು ಇಲ್ಲ. ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಹೇಳುವ ಡಿ. 16ರ ರಾತ್ರಿ ಆತ ನನ್ನ ಜೊತೆ ಇದ್ದ. ಆತನನ್ನು ತಪ್ಪಾಗಿ ಪ್ರಕರಣದಲ್ಲಿ ಸಿಕ್ಕಿ ಹಾಕಲಾಗಿದೆ’ ಎಂದರು. ‘ನನ್ನ ಮಗ ನನ್ನೊಂದಿಗೆ ಅಂಗಡಿಯಲ್ಲಿ ಇದ್ದ. ಅಲ್ಲಿಂದಲೇ ಪೊಲೀಸರು ಆತನನ್ನು ಮಾರನೇ ದಿನ ಸಂಜೆ ಬಂಧಿಸಿದರು. ಯಾರು ಆತನ ಹೆಸರು ಹೇಳಿದರೋ ಗೊತ್ತಿಲ್ಲ ಎಂದು ಅವರು ಹೇಳಿದರು.

ಪವನ್‌ ತಾಯಿ ಇಂದ್ರಾ ದೇವಿ ಸಹ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ. ಮಗನಿಗೆ ಕಠಿಣ ಶಿಕ್ಷೆ  ನೀಡಲು ಮಾಧ್ಯಮಗಳೇ ಕಾರಣ ಎಂದು ಅವರು ಆರೋಪಿಸಿದ್ದಾರೆ.

‘ಈಗ ನಿಮ್ಮ ಎಲ್ಲ ಬೇಡಿಕೆಗಳು ಈಡೇರಿವೆ. ಇಲ್ಲಿಂದ ಹೋಗಿ. ಆತನ ಬೆರಳಚ್ಚು ಪಡೆಯಲು ಸಾಧ್ಯವಾಗಿದೆಯೇ’ ಎಂದು ಅವರು ಮನೆಯಲ್ಲಿ ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೀರ್ಪಿನಿಂದ ಯುವತಿ ಆತ್ಮಕ್ಕೆ ಶಾಂತಿ: ಗೆಳೆಯ
ನವದೆಹಲಿ (ಐಎಎನ್‌ಎಸ್‌): ಅತ್ಯಾ­ಚಾರ ಪ್ರಕರಣದ ನಾಲ್ವರು ಆರೋಪಿ­ಗಳಿಗೆ ಮರಣ­ದಂಡನೆ ವಿಧಿಸಿ­ರು­­ವು­ದನ್ನು ಸ್ವಾಗತಿಸಿರುವ ನೊಂದ ಯುವತಿಯ ಗೆಳೆಯ, ‘ಈ ತೀರ್ಪಿನಿಂದ ಆಕೆಯ ಆತ್ಮ ಈಗ ಶಾಂತಿಯಲ್ಲಿ ವಿಶ್ರಮಿಸುವುದು’ ಎಂದು ತಿಳಿಸಿದ್ದಾನೆ.

‘ಕೋರ್ಟ್ ನಿರ್ಧಾರದಿಂದ ಯುವ­ತಿಯ ಆತ್ಮಕ್ಕೆ ಶಾಂತಿ ಸಿಗಲಿದೆ. ನನಗೂ ಸಂತಸವಾಗಿದೆ. ಇದು ಇಡೀ ದೇಶಕ್ಕೆ ಸಂದ ಜಯ’ ಎಂದು ಘಟನೆ ನಡೆದಾಗ ಯುವತಿ ಜತೆಗಿದ್ದ ಆತ ಬಣ್ಣಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT