ಬೆಂಗಳೂರು: ಆಂಧ್ರಪ್ರದೇಶದ ಮೆಹಬೂಬ್ನಗರದಲ್ಲಿ ಅ.30ರಂದು ಸಂಭವಿಸಿದ್ದ ವೋಲ್ವೊ ಬಸ್ ದುರಂತ ಪ್ರಕರಣ ಸಂಬಂಧ ಆಂಧ್ರದ ಸಿಓಡಿ ಅಧಿಕಾರಿಗಳು ಗುರುವಾರ ಜಬ್ಬಾರ್ ಟ್ರಾವೆಲ್ಸ್ನ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಜಬ್ಬಾರ್ ಟ್ರಾವೆಲ್ಸ್ನ ಕಲಾಸಿಪಾಳ್ಯದ ಕಚೇರಿಗೆ ಗುರುವಾರ ಮಧ್ಯಾಹ್ನ ಭೇಟಿ ನೀಡಿದ ಡಿಎಸ್ಪಿ ಮುರಳೀಧರ್ ನೇತೃತ್ವದ ತಂಡ, ಟ್ರಾವೆಲ್ಸ್ನ ಏಜೆಂಟ್ಗಳಾದ ಶಬೀರ್, ಅಕ್ರಂ, ಅಮನುಲ್ಲ ಶರೀಫ್ ಮತ್ತು ಮಹಮದ್ ರಫೀಕ್ ಎಂಬುವರನ್ನು ಬಂಧಿಸಿದರು. ನಂತರ ತಮ್ಮದೇ ವಾಹನದಲ್ಲಿ ಅವರನ್ನು ಹೈದರಾಬಾದ್ಗೆ ಕರೆದೊಯ್ದರು ಎಂದು ಪೊಲೀಸರು ಹೇಳಿದ್ದಾರೆ.
ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಟ್ರಾವೆಲ್ಸ್ ಮಾಲೀಕ ಜಮೀಲ್ ಜಬ್ಬಾರ್ ಇರಲಿಲ್ಲ. ಹೀಗಾಗಿ ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ ಅಧಿಕಾರಿಗಳು, ಜಮೀಲ್, ಶುಕ್ರವಾರ ಸಂಜೆಯೊಳಗೆ ಹೈದರಾಬಾದ್ನ ಸಿಓಡಿ ಕಚೇರಿಗೆ ಹಾಜರಾಗಿ ಹೇಳಿಕೆ ನೀಡಬೇಕು. ಅವರಿಗೆ ಈ ವಿಷಯ ತಿಳಿಸಿ ಎಂದು ಎಚ್ಚರಿಕೆ ನೀಡಿ ಹೋಗಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಅ.30ರಂದು ಮೆಹಬೂಬ್ನಗರದ ಪಾಲೆಂ ಬಳಿ ಚಲಿಸುತ್ತಿದ್ದ ಬಸ್ಗೆ ಬೆಂಕಿ ಹೊತ್ತಿಕೊಂಡು 45 ಜನ ಸಜೀವ ದಹನವಾಗಿದ್ದರು. ಪ್ರಕರಣ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಆಂಧ್ರ ಪೊಲೀಸರು, ಜಬ್ಬಾರ್ ಟ್ರಾವೆಲ್ಸ್ನ ಮಾಲೀಕರಲ್ಲಿ ಒಬ್ಬರಾದ ಶಕೀಲ್ ಜಬ್ಬಾರ್ ಮತ್ತು ಬಸ್ ಚಾಲಕ ಫಿರೋಜ್ ಖಾನ್ನನ್ನು ಬಂಧಿಸಿದ್ದರು. ಬಳಿಕ ಶಕೀಲ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.